ದಾವಣಗೆರೆ: ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ (ಜಿಎಂಐಟಿ)ಯಲ್ಲಿ ಹನಿವೆಲ್ ಕಂಪನಿಯ ಕೇಂದ್ರದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಕರ್ನಾಟಕ ರಾಜ್ಯದ 9ನೇ ಕೇಂದ್ರವಾಗಿ ಜಿಎಂಐಟಿಯಲ್ಲಿ ಕೇಂದ್ರ ಸ್ಥಾಪಿಸಲಾಗಿದೆ.ಕೇಂದ್ರದ ಮೂಲಕ ಹಲವು ತರಬೇತಿ ಆಯೋಜಿಸಲಾಗುತ್ತಿದೆ. ಮೊದಲು ಬಡತನ ರೇಖೆಗಿಂತ ಕೆಳಗಿರುವ ಅಂತಿಮ ವರ್ಷದ 120 ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಅವರಿಗೆ 15 ದಿನಗಳ ತರಬೇತಿ ನೀಡಿ ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡಲಾಗುವುದು. ತರಬೇತಿ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗವಕಾಶ ಒದಗಿಸಲಾಗುವುದು ಎಂದು ಮಾಹಿತಿ ಮತ್ತು ಸಂವಹನ ಅಕಾಡೆಮಿ (ಐಸಿಟಿ) ಕರ್ನಾಟಕ ವಿಭಾಗದ ಮುಖ್ಯಸ್ಥ ವಿಷ್ಣು ಪ್ರಸಾದ್ ಹೇಳಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್ ಎಂಜಿನಿಯರಿಂಗ್ ವಿಭಾಗದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ತರಬೇತಿ ನೀಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯ್ ಕುಮಾರ್ ಸಲಹೆ ನೀಡಿದರು.
ಜಿಎಂಐಟಿ ಕಾಲೇಜು ವಿವಿಧ ಪ್ರತಿಷ್ಠಿತ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಒಟ್ಟು 88 ಒಡಂಬಡಿಕೆಗಳು ಮತ್ತು 11 ಶ್ರೇಷ್ಠತಾ ಕೇಂದ್ರಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದರು.
ಐಸಿಟಿ ಅಕಾಡೆಮಿ ದಾವಣಗೆರೆ ವಿಭಾಗದ ಸಂಯೋಜಕ ಜಕಾವುಲ್ಲ, ಕಾಲೇಜಿನ ಡೀನ್ ಡಾ.ಬಿ.ಎಸ್. ಸುನಿಲ್ಕುಮಾರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೀರ್ತಿಪ್ರಸಾದ್, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.