ದಾವಣಗೆರೆ: 2ಎ ಮೀಸಲಾತಿಗೆ ಒತ್ತಾಯಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಜ.29ಕ್ಕೆ ದಾವಣಗೆರೆಗೆ ಬರಲಿದ್ದು, ಅಂದು ನಡೆಯುವ ಸಮಾವೇಶದಲ್ಲಿ ಸಮಾಜದ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವರು ಎಂದು ಅಖಿಲ ಭಾರತ ಪಂಚಮಸಾಲಿ ಮಹಿಳಾ ಸಂಘ (ಚೆನ್ನಮ್ಮ ಬಳಗ)ದ ರಾಜ್ಯ ಘಟಕದ ಅಧ್ಯಕ್ಷ ವೀಣಾ ಕಾಶೆಪ್ಪನವರ್ ಹೇಳಿದರು.
‘ಮನೆಯಿಂದ ಹೊರಬಾರದ ಸಮಾಜದ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣ, ಉದ್ಯೋಗ ಹಾಗೂ ಭವಿಷ್ಯಕ್ಕಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದು ‘ಕುರ್ಚಿಗಿ’ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಸಮಾಜದವರ ಬೆವರಿನಿಂದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮೀಸಲಾತಿ ಜಾರಿಗೆ ತರುವ ಮೂಲಕ ಈ ಸಮಾಜದ ಋಣ ತೀರಿಸಬೇಕು. ಪಾದಯಾತ್ರೆ ದಾವಣಗೆರೆ ದಾಟುವಷ್ಟರಲ್ಲಿ ಹಕ್ಕೊತ್ತಾಯ ನೀಡಬೇಕು. ಬೆಂಗಳೂರು ತಲುಪಿದರೂ ಮೀಸಲಾತಿ ನೀಡದಿದ್ದರೆ, ಖಡ್ಗಕ್ಕೆ ಪೂಜೆ ಮಾಡುವ ಮೂಲಕ ಮಹಿಳೆಯರು ಒಂದು ದಿನ ಉಪವಾಸ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುಳಾ, ಲಕ್ಷ್ಮಿ ಕರಿಬಸಪ್ಪ, ವಿಜಯಾ, ಆಶಾ, ಮಂಜುಳಾ ಮಹೇಶ್ ಇದ್ದರು.