ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಟ್ರಾಫಿಕ್ ಸುಧಾರಣೆಗೆ ರಾಡಾರ್ ಆಧಾರಿತ ‘ಐಟಿಎಂಎಸ್‌’ ವ್ಯವಸ್ಥೆ

Last Updated 6 ಮೇ 2022, 5:15 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಟ್ರಾಫಿಕ್‌ ವ್ಯವಸ್ಥೆ ಸುಧಾರಣೆಗಾಗಿ ಇಂಟೆಲಿಜೆಂಟ್‌ ಅಥವಾ ಇಂಟಿಗ್ರೇಟೆಡ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಟಿಎಂಎಸ್‌) ಶೀಘ್ರದಲ್ಲಿ ಜಾರಿಯಾಗಲಿದೆ. ನವದೆಹಲಿಯ ನಂತರ ರಾಡಾರ್‌ ಆಧಾರಿತ ಟ್ರಾಫಿಕ್ ನಿಯಂತ್ರಣ ತಂತ್ರಜ್ಞಾನ ಜಾರಿಯಾಗುತ್ತಿರುವುದು ದಾವಣಗೆರೆಯಲ್ಲೇ ಎಂಬುದು ಇದರ ಹೆಗ್ಗಳಿಕೆ.

ನಗರದ 23 ಸ್ಥಳಗಳಲ್ಲಿ ಅಡಾಪ್ಟಿವ್‌ ಟ್ರಾಫಿಕ್‌ ಸಿಗ್ನಲ್‌ಗಳನ್ನು ಹಾಗೂ ಐಟಿಎಂಎಸ್‌ ಉಪಕರಣಗಳನ್ನು ಸ್ಥಾಪಿಸುವ ಯೋಜನೆ ಇದಾಗಿದ್ದು, ಈಗಾಗಲೇ 18 ಸ್ಥಳಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಉಳಿದವುಗಳಿಗೆ ಸಣ್ಣ–ಪುಟ್ಟ ಕೆಲಸಗಳು ಬಾಕಿ ಇವೆ. ಸದ್ಯ ಇವುಗಳಿವೆ ಆಪ್ಟಿಕಲ್‌ ಫೈಬರ್‌ ಕೇಬಲ್‌ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಸಿಬ್ಬಂದಿ ತಿಳಿಸಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ?: ಈ ವ್ಯವಸ್ಥೆಯಲ್ಲಿ ಮೂರು ಪ್ರಮುಖ ವಿಭಾಗಗಳು ಇವೆ. ರಾಡಾರ್‌, ಜಿಪಿಎಸ್‌ ಹಾಗೂ ಸಿಂಕ್ರೊನೈಸ್‌. ರಾಡಾರ್‌ ಸಂಕೇತಗಳ ಮೂಲಕ ಎಲ್ಲ ಸಿಗ್ನಲ್‌ಗಳಲ್ಲಿ ಇರುವ ವಾಹನಗಳ ಹಾಗೂ ಜನ ದಟ್ಟಣೆ ತಿಳಿಯಬಹುದು. ಕೆಲವೆಡೆ ಮೂರು ರಸ್ತೆಗಳು ಕೂಡುವಲ್ಲಿ, ಕೆಲವೆಡೆ ನಾಲ್ಕು ರಸ್ತೆಗಳು ಕೂಡುವಲ್ಲಿ ಇನ್ನೂ ಕೆಲವೆಡೆ ಐದು ರಸ್ತೆಗಳು ಕೂಡುವ ಕಡೆಗಳಲ್ಲಿ ವೃತ್ತಗಳು ಇರುತ್ತವೆ. ಈ ವೃತ್ತಗಳಲ್ಲಿ ಒಂದು ರಸ್ತೆಯಲ್ಲಿ ಜನದಟ್ಟಣೆ ಖಾಲಿಯಾದ ಕೂಡಲೇ ಮತ್ತೊಂದು ರಸ್ತೆಗೆ ಸಿಗ್ನಲ್‌ ಅನ್ನು ಪಾಸ್‌ ಮಾಡಿಸಲು ಇದರಲ್ಲಿ ಸಾಧ್ಯ. ಇದರಿಂದ ಸಮಯ ವ್ಯರ್ಥವಾಗುವುದು ನಿಲ್ಲುತ್ತದೆ. ಒಂದು ರಸ್ತೆಯಲ್ಲಿ ಅತಿ ದೀರ್ಘವಾದ ವಾಹನ ದಟ್ಟಣೆ ಕಂಡು ಬಂದರೆ ಅಲ್ಲಿ ಹೆಚ್ಚು ಸಮಯ ಸಿಗ್ನಲ್‌ ನೀಡಲೂ ಇದರಿಂದ ಸಾಧ್ಯವಾಗುತ್ತದೆ.

ಜಿಪಿಎಸ್‌ ಇರುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ ದೂರ ಹಾಗೂ ವಾಹನಗಳ ವೇಗವನ್ನು ಗಮನಿಸಲು ಸಾಧ್ಯ. ವೇಗದ ಮಿತಿಯನ್ನು ಮೀರುವ ವಾಹನವನ್ನೂ ಗುರುತಿಸಿ ದಂಡ ವಿಧಿಸಬಹುದು.

ಸಿಂಕ್ರೊನೈಸ್ಡ್‌ ವ್ಯವಸ್ಥೆಯಿಂದ ವಾಹನಗಳು ನಗರ ವ್ಯಾಪ್ತಿಯಲ್ಲಿ 40 ಕಿ.ಮೀ ವೇಗದ ಮಿತಿಯಲ್ಲೇ ಸಂಚರಿಸಬೇಕೆಂಬ ನಿರ್ಬಂಧ ವಿಧಿಸಲಾಗುತ್ತದೆ. ಹೀಗೆ ಒಂದೇ ವೇಗದ ಮಿತಿಯಲ್ಲಿ ಸಂಚರಿಸಿದಾಗ ಒಂದು ಸಿಗ್ನಲ್‌ ದಾಟಿದರೆ ಮುಂದಿನ ಮೂರ್ನಾಲ್ಕು ಸಿಗ್ನಲ್‌ಗಳಲ್ಲಿ ತಡೆ ಇರದಂತೆ ವ್ಯವಸ್ಥೆ ಮಾಡಲಾಗುತ್ತದೆ.

ಪ್ರಯೋಜನ: ಐಟಿಎಂಎಸ್‌ ಜಾರಿಯಿಂದ ವಾಹನಗಳ ಇಂಧನ ಉಳಿತಾಯ, ವಾಯುಮಾಲಿನ್ಯ ಕಡಿಮೆ ಮಾಡುವುದು ಸಾಧ್ಯ. ಜನರು ಇದರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಖಂಡಿತ ಅಪಘಾತಗಳನ್ನು ಕಡಿಮೆ ಮಾಡಬಹುದು ಎನ್ನುವುದು ಪೊಲೀಸ್‌ ಇಲಾಖೆಯ ಭರವಸೆ.

ವಿಶೇಷ ಸಾಧನಗಳು: ಐಟಿಎಂಎಸ್ ಸಾಧನಗಳಲ್ಲಿ ಎಸ್‌ವಿಡಿ (ಸ್ಪೀಡ್‌ ವಯೊಲೇಶನ್‌ ಡಿವೈಸ್‌) ಎಂಬ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ವಾಹನಗಳ ವೇಗದ ಮಿತಿಯನ್ನು ಗುರುತಿಸಲಾಗುತ್ತದೆ. ನಿಯಮಗಳನ್ನು ಮೀರಿದರೆ ಕಮಾಂಡ್‌ ಸೆಂಟರ್‌ಗೆ ಮಾಹಿತಿ ಹೋಗುತ್ತದೆ. ಅಲ್ಲಿ ಇ–ಚಲನ್‌ ಜನರೆಟ್‌ ಆಗುತ್ತದೆ. ನಿಯಮ ಮೀರಿದವರ ವಿರುದ್ಧ ಐಎಂವಿ (ಇಂಡಿಯನ್‌ ಮೋಟರ್‌ ವೆಹಿಕಲ್‌ ಆ್ಯಕ್ಟ್‌) ಪ್ರಕರಣ ದಾಖಲಿಸಲಾಗುತ್ತದೆ.

ಆರ್‌ಎಲ್‌ವಿಡಿ (ರೆಡ್‌ ಲೈಟ್‌ ವಯೋಲೇಶನ್‌ ಡಿವೈಸ್‌) ಎಂಬ ಸಾಧನವನ್ನು ಪ್ರಮುಖ ಸಿಗ್ನಲ್‌ಗಳಲ್ಲಿ ಅಳವಡಿಸಲಾಗುತ್ತದೆ. ಇದರ ಮೂಲಕ ಝಿಬ್ರಾ ಕ್ರಾಸ್‌ ಹಾಗೂ ರೆಡ್‌ ಲೈಟ್‌ ಸಿಗ್ನಲ್‌ ಜಂಪ್‌ ಮಾಡುವ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುತ್ತದೆ. ಇಂಥ ಸಾಧನ ಸದ್ಯಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಳವಡಿಸಲಾಗಿದೆ.

ಸಿಗ್ನಲ್‌ ಜಂಪ್‌ ಮಾಡಬಾರದು, ಸ್ಟಾಪ್‌ ಲೈನ್‌ಗಳಲ್ಲೇ ಜನರು ನಿಲ್ಲಬೇಕು, ನಗರ ವ್ಯಾಪ್ತಿಯಲ್ಲಿ ವಾಹನಗಳು ನಿಗದಿತ ವೇಗವನ್ನು ಮೀರಬಾರದು ಎಂಬ ಮೂರು ಪ್ರಮುಖ ಉದ್ದೇಶಗಳಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹಂತಹಂತವಾಗಿ ಜಾರಿಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಪೊಲೀಸರ ಸದ್ಯದ ಆಲೋಚನೆ.

2018–19ನೇ ಸಾಲಿನಲ್ಲಿ ಆರ್‌. ಚೇತನ್‌ ಅವರು ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾಗ ಯೋಜನೆಯ ಪ್ರಸ್ತಾವ ತಯಾರಿಸಲಾಗಿತ್ತು. ರಸ್ತೆಯಲ್ಲಿ ವಾಹನ ದಟ್ಟಣೆ ಎಷ್ಟಿದೆ ಎಂಬ ಬಗ್ಗೆ ಪೊಲೀಸ್‌ ಇಲಾಖೆ ಹಾಗೂ ಸ್ಮಾರ್ಟ್‌ ಸಿಟಿ ತಂತ್ರಜ್ಞರ ತಂಡದವರು ಸಮೀಕ್ಷೆ ನಡೆಸಿದ್ದರು. ಅದಕ್ಕೆ ತಕ್ಕಂತೆ ಯೋಜನೆ ಈಗ ಜಾರಿಯಾಗುವ ಹಂತದಲ್ಲಿದೆ.

ವೇಗದ ಮಿತಿಯನ್ನು ಪ್ರಮುಖವಾಗಿ ಪಿಬಿ ರಸ್ತೆ, ಹದಡಿ ರಸ್ತೆ, ಡೆಂಟಲ್‌ ಕಾಲೇಜು ರಸ್ತೆ, ಅಕ್ತರ್‌ ರಾಜಾ ವೃತ್ತ (ರಿಂಗ್‌ ರಸ್ತೆ) ಹಾಗೂ ಆರ್‌ಎಂಸಿ ರಸ್ತೆಗಳಲ್ಲಿ ಜಾರಿಗೊಳಿಸಲೂ ಯೋಜಿಸಲಾಗಿದೆ. ಮುಂದಿನ 10 ವರ್ಷಗಳಿಗೆ ಬೇಕಾಗುವಂಥ ತಂತ್ರಜ್ಞಾನ ಇರುವಂತೆ ಟ್ರಾಫಿಕ್‌ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಪೊಲೀಸ್‌ ಇಲಾಖೆ ಸನ್ನದ್ಧಗೊಂಡಿದೆ.

* ಸ್ಮಾರ್ಟ್‌ ಸಿಟಿ ಯೋಜನೆಯ ಅಡಿ ಇಂಟಿಗ್ರೇಟೆಡ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟೆಮ್‌ (ಐಡಿಎಂಎಸ್‌) ಯೋಜನೆಯ ಮೊದಲ ಹಂತದ ಕಾಮಗಾರಿ ಈಗ ಅಂತಿಮ ಹಂತದಲ್ಲಿ ಇದೆ. ಇನ್ನು ಒಂದು ತಿಂಗಳೊಳಗೆ ಇದು ಪೂರ್ಣಗೊಳ್ಳುವ ಸಾಧ್ಯತೆ ಇದೆ.

– ಸಿ.ಬಿ. ರಿಷ್ಯಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ದಾವಣಗೆರೆ

ಪೊಲೀಸ್‌ ಸಿಬ್ಬಂದಿಗೆ ತರಬೇತಿ

ಐಟಿಎಂಎಸ್‌ ಜಾರಿಯಾದ ನಂತರ ಟ್ರಾಫಿಕ್‌ ವ್ಯವಸ್ಥೆಯನ್ನು ಸೆಂಟ್ರಲ್‌ ಕಮಾಂಡ್‌ ಸೆಂಟರ್‌ ಮೂಲಕ ನಿಯಂತ್ರಿಸಬಹುದು. ಸದ್ಯ‌ಕ್ಕೆ ಇದನ್ನು ಸ್ಮಾರ್ಟ್‌ ಸಿಟಿ ತಂತ್ರಜ್ಞರು ನಿರ್ವಹಣೆ ಮಾಡುತ್ತಿದ್ದಾರೆ. ಪೊಲೀಸ್‌ ಇಲಾಖೆಯ ಆಯ್ದ ಸಿಬ್ಬಂದಿಗೆ 15 ದಿನಗಳ ತರಬೇತಿ ನೀಡಲಾಗುತ್ತದೆ. ನಂತರ ಈ ವ್ಯವಸ್ಥೆ ಪೊಲೀಸ್‌ ಇಲಾಖೆಗೆ ಹಸ್ತಾಂತರವಾಗಲಿದೆ.

ಸಿಗ್ನಲ್‌ ಜಂಪ್‌ ಮಾಡಿದವರ ಗುರುತು ಹಾಗೂ ಅವರ ವಾಹನದ ನಂಬರ್‌ ಸೆಂಟ್ರಲ್‌ ಕಮಾಂಡ್‌ ಸೆಂಟರ್‌ನಲ್ಲೇ ಲಭ್ಯವಾಗುತ್ತದೆ. ವಾಹನದ ಮಾಲೀಕರ ಹೆಸರಿಗೆ ಇ–ಚಲನ್‌ ಜನರೇಟ್‌ ಆಗಿ ಅವರ ವಿಳಾಸಕ್ಕೆ ನೋಟಿಸ್‌ ತಲುಪುತ್ತದೆ.

₹ 5 ಕೋಟಿ ವೆಚ್ಚ

ಒಟ್ಟು ₹ 5 ಕೋಟಿ ವೆಚ್ಚದಲ್ಲಿ ಐಟಿಎಂಎಸ್ ಯೋಜನೆ ಜಾರಿಯಾಗುತ್ತಿದೆ. ಎಲ್ಲ ಸ್ಮಾರ್ಟ್‌ ಸಿಟಿಗಳಲ್ಲಿಯೂ ಇದು ಜಾರಿಯಾಗುತ್ತಿದೆ. ದಾವಣಗೆರೆಯಲ್ಲಿ ಮಾತ್ರ ಇದರಲ್ಲೇ ವಿಶೇಷವಾದ ‘ಅಡಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟೆಮ್‌’ ಅನ್ನು ಕೈಗೆತ್ತಿಕೊಳ್ಳಲಾಗಿದೆ. ಉಳಿದ ಕಡೆಗಳಲ್ಲಿ ಕ್ಯಾಮೆರಾ ಆಧಾರಿತ ವ್ಯವಸ್ಥೆ ಇದ್ದರೆ ಇಲ್ಲಿ ಅದು ರಾಡಾರ್‌ ಆಧಾರಿತವಾಗಿದೆ. ಕ್ಯಾಮೆರಾಗಳು ಚಿತ್ರ ಸೆರೆ ಹಿಡಿಯಲು ನಿರ್ದಿಷ್ಟ ದೂರದ ವ್ಯಾಪ್ತಿ ಇದ್ದರೆ. ರಾಡಾರ್‌ಗೆ ವ್ಯಾಪ್ತಿ ಎಂಬುದಿಲ್ಲ. ಇಡೀ ನಗರದ ಎಲ್ಲೆಡೆಯ ವಾಹನದ ಚಿತ್ರಗಳನ್ನೂ ಅದು ಸೆರೆ ಹಿಡಿಯಬಹುದು.

23 ಜಂಕ್ಷನ್ಸ್‌ಗಳಲ್ಲಿ ಅಡಾಪ್ಟಿವ್‌ ಟ್ರಾಫಿಕ್‌ ಸಿಗ್ನಲ್ಸ್‌ಗಳನ್ನು ಅಳವಡಿಸಲಾಗುತ್ತದೆ. ಇದರ ಜೊತೆ ಐಟಿಎಂಎಸ್‌ ಸಾಧನಗಳು ಇರುತ್ತವೆ. ಇದರಲ್ಲಿ ಅಟೊಮೇಟಿಕ್‌ ನಂಬರ್ ಪ್ಲೇಟ್ಸ್‌ ರಿಕಗ್ನಿಷನ್‌ (ಎಎನ್‌ಪಿಆರ್‌) ಸಾಧನಗಳು ಇರುತ್ತವೆ. ನಗರದ ಆರಂಭ ಹಾಗೂ ಹೊರಹೋಗುವ ಜಂಕ್ಷನ್‌ಗಳಲ್ಲಿ ಇವುಗಳನ್ನು ಹಾಕಲಾಗಿರುತ್ತದೆ. ಇವು ನಗರಕ್ಕೆ ಬರುವ ವಾಹನಗಳೆಲ್ಲದರ ನಂಬರ್‌ ಪ್ಲೇಟ್‌ಗಳ ಚಿತ್ರ ಸೆರೆ ಹಿಡಿಯುತ್ತದೆ. ಶಾಮನೂರು ರಸ್ತೆ, ಹದಡಿ ರಸ್ತೆ ಹಾಗೂ ಮಾಗನಳ್ಳಿ ಕ್ರಾಸ್‌ಗಳಲ್ಲಿ ಇವುಗಳನ್ನು ಹಾಕಲಾಗುತ್ತದೆ.

– ರವೀಂದ್ರ ಮಲ್ಲಾಪುರ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT