ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇರಲ ಬೆಳೆದು ಆದಾಯ ಹೆಚ್ಚಿಸಿಕೊಂಡ ಶರತ್ ಬಾಬು

ವರ್ಷದಲ್ಲಿ ಎರಡು ಬಾರಿ ಫಸಲು; ಎರಡು ಎಕರೆಯಲ್ಲಿ ಲಕ್ಷಾಂತರ ಲಾಭ ಪಡೆಯುತ್ತಿರುವ ಯುವ ರೈತ
Last Updated 22 ಮಾರ್ಚ್ 2023, 5:58 IST
ಅಕ್ಷರ ಗಾತ್ರ

ಮಾಯಕೊಂಡ: ಪ್ರಯೋಗಾತ್ಮಕ ಕೃಷಿಗೆ ಒತ್ತುಕೊಡುತ್ತ ಅಡಿಕೆ ನಡುವೆ ಸೀಬೆ (ಪೇರಲ) ಬೆಳೆದು, ನಿರಂತರ ಆದಾಯ ಪಡೆಯುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ ಮಾಯಕೊಂಡ ಗ್ರಾಮದ ರೈತ ಶರತ್ ಬಾಬು.

ತಮ್ಮ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುವ ನಿರ್ಧಾರ ಮಾಡಿದ್ದ ಇವರು, ಫಸಲಿಗೆ ಐದಾರು ವರ್ಷ ಕಾಯಬೇಕೆಂಬುದನ್ನು ಅರಿತು ಅಂತರ ಬೆಳೆ ಬೆಳೆಯುವ ಬಗ್ಗೆ ಯೋಚಿಸಿದರು. ಮೊದಲು ಥೈವಾನ್ ಪಿಂಕ್ ತಳಿಯ ಪೇರಲ ಸಸಿಗಳನ್ನು ಆಂಧ್ರದಿಂದ ತಂದು, ಡಿಗ್ಗರ್ ಮೂಲಕ ಗುಂಡಿ ತೆಗೆಸಿ ಅದಕ್ಕೆ ಕಾಂಪೋಸ್ಟ್ ಗೊಬ್ಬರ ತುಂಬಿಸಿ, ನಾಟಿ ಮಾಡಿದರು. ಡ್ರಿಪ್ ಮೂಲಕ ಸಸಿಗಳಿಗೆ ನೀರುಣಿಸಿದರು. ತಜ್ಞರ ಸಲಹೆಯಂತೆ ಗೊಬ್ಬರ, ನೀರು, ಕೀಟನಾಶಕ ಸಿಂಪಡಿಸಿದರು. ಇದಕ್ಕೆ ತಗುಲಿದ್ದು ₹ 3 ಲಕ್ಷ ಖರ್ಚು.

ಸಸಿ ನಾಟಿ ಮಾಡಿದ ವರ್ಷಕ್ಕೆ ಫಸಲು ಬರಲು ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಫಸಲು ಬರುತ್ತಿದೆ. ಈಗ ಮೂರು ವರ್ಷದ ತೋಟವಿದ್ದು, ವಾರ್ಷಿಕ ಸರಾಸರಿ ₹ 10 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಈಗ ಪೇರಲ ಬೆಳೆ ಇವರ ನಿರಂತರ ಆದಾಯದ ಮೂಲವಾಗಿದೆ.

ಸಮೃದ್ಧ ಅಡಿಕೆ: ಪೇರಲ ನಾಟಿ ಮಾಡಿದ ಹದಿನೆಂಟು ತಿಂಗಳ ನಂತರ ಅಂತರ ಬೆಳೆಯಾಗಿ ಅಡಕೆ ಸಸಿ ನೆಡಲಾಗಿದೆ. ಪೇರಲ ಬೆಳೆಯ ನಿರ್ವಹಣೆಯಲ್ಲಿ ಶೂನ್ಯ ನಿರ್ವಹಣೆಯ ಮೂಲಕ ಅಡಿಕೆ ಅತ್ಯುತ್ತಮವಾಗಿ ಬೆಳೆಯುತ್ತಿದೆ. ಇನ್ನು ಎರಡು ವರ್ಷದಲ್ಲಿ ಅಡಿಕೆ ಫಸಲಿಗೆ ಬರುತ್ತದೆ. ಆಗ ಆದಾಯ ದ್ವಿಗುಣಗೊಳ್ಳುತ್ತದೆ ಎಂಬ ಆಶಯ ಶರತ್‌ ಅವರದ್ದು.

ಉತ್ತಮ ಬೇಡಿಕೆ: ‘ಪೇರಲ ಬೆಳೆಗೆ ಬೇಡಿಕೆ ಚೆನ್ನಾಗಿದ್ದು, ಖರೀದಿದಾರರು ಸ್ಥಳಕ್ಕೆ ಬಂದು ಖರೀದಿಸುತ್ತಿದ್ದಾರೆ. ಕಟಾವು ಮಾಡಿ ಗ್ರೇಡ್ ಮಾಡಿ, ಇಪ್ಪತ್ತು ಕೆ.ಜಿ.ಯ ಬಾಕ್ಸ್‌ಗಳಿಗೆ ತುಂಬಿ ಕೊಡಲಾಗುತ್ತದೆ. ಬೆಂಗಳೂರು, ಹರಪನಹಳ್ಳಿ, ಶಿವಮೊಗ್ಗ, ದಾವಣಗೆರೆಗಳಿಂದ ಖರೀದಿದಾರರು ಬರುತ್ತಾರೆ. ದಾವಣಗೆರೆ ಮಾರುಕಟ್ಟೆ ಉತ್ತಮವಾಗಿದೆ’ ಎಂದು ಹರ್ಷದಿಂದ ನುಡಿಯುತ್ತಾರೆ.

‘ಅಡಿಕೆ ಫಸಲು ಬರುವವರೆಗೂ ಅಂತರ ಬೆಳೆಯಾಗಿ ಪೇರಲ ರೀತಿಯ ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ನಷ್ಟದ ಸುಳಿಯಿಂದ ತಪ್ಪಿಸಿ ಕೊಳ್ಳಬಹುದು’ ಎಂದು ಇವರು ಹೇಳುತ್ತಾರೆ.

ರೈತ ಶರತ್ ಬಾಬು ಅವರ ಸಂಪರ್ಕ ಸಂಖ್ಯೆ: 9886118339

***

ತರಕಾರಿಯಿಂದ ನಷ್ಟ; ಪೇರಲದಿಂದ ಉತ್ತಮ ಆದಾಯ

‘ನಾವು ಅಲ್ಪಾವಧಿ ಬೆಳೆಗಳಾಗಿ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಿದ್ದೆವು. ಉತ್ತಮ ಆದಾಯ ಬರುತ್ತಿತ್ತು. ಆದರೆ, ಕೆಲವೊಮ್ಮೆ ದರ ಕುಸಿತ ನಷ್ಟಕ್ಕೆ ಕಾರಣ ಆಗುತ್ತಿತ್ತು. ವರ್ಷದ ಹಿಂದೆ ಪೇರಲ ನಾಟಿ ಮಾಡಿದ್ದೇನೆ. ಈಗ ಫಸಲು ಪ್ರಾರಂಭವಾಗಿದೆ. ಈಗ ದರ ಕಡಿಮೆ ಇದೆ ಎಂದರೂ ಕೆ.ಜಿ.ಗೆ ₹ 26ರಂತೆ ಸ್ಥಳಕ್ಕೇ ಬಂದು ಹರಪನಹಳ್ಳಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ದರ ಸಿಗುತ್ತದೆ’ ಎಂದು ಹೆಬ್ಬಾಳು ಗ್ರಾಮದ ಪೇರಲ ಬೆಳೆಗಾರ ನಿರಂಜನ್ ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT