ದಾವಣಗೆರೆ: ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಎಫ್ಐಆರ್ ದಾಖಲಾಗಿದ್ದ ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗದ 10 ನೌಕರರನ್ನು ಅಮಾನತು ಮಾಡಲಾಗಿದೆ.
ಹರಿಹರ ಡಿಪೊದ 6 ಹಾಗೂ ದಾವಣಗೆರೆ ಡಿಪೊದ 4 ಮಂದಿಯನ್ನು ಅಮಾನತು ಮಾಡಿದ್ದು, ಮನವಿಯ ಮೇರೆಗೆ ದಾವಣಗೆರೆಗೆ ವರ್ಗಾವಣೆಗೊಂಡಿದ್ದ 66 ನೌಕರರನ್ನು ಪುತ್ತೂರು, ಶಿವಮೊಗ್ಗ ಹಾಗೂ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಬಾಳ್ ತಿಳಿಸಿದರು.
ದಾವಣಗೆರೆಯ 66 ಮಂದಿ ಎರಡು ವರ್ಷಗಳ ಹಿಂದೆ ದಾವಣಗೆರೆಗೆ ವರ್ಗಾವಣೆಯಾಗಿದ್ದರು. ಆದರೆ ಅವರು ಕರ್ತವ್ಯಕ್ಕೆ ಹಾಜರಾಗದ ಕಾರಣ ಈ ಹಿಂದಿನ ಜಾಗಗಳಿಗೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮುಷ್ಕರದ ನಡುವೆಯೂ ಮಂಗಳವಾರ 95 ಬಸ್ಗಳು ಸಂಚರಿಸಿದ್ದು, 150ಕ್ಕೂ ಹೆಚ್ಚು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಹೊಸಪೇಟೆ, ಬಳ್ಳಾರಿ ಹಾಗೂ ಹರಪನಹಳ್ಳಿ ಕಡೆಗಳಿಗೆ ಹೆಚ್ಚಿನ ಬಸ್ಗಳು ಸಂಚರಿಸಿವೆ.