ದಾವಣಗೆರೆ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶುಕ್ರವಾರ ಕಬ್ಬು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ರೊಟ್ಟಿ ಖರೀದಿ ಭರಾಟೆ ಇತ್ತು.
ವಿವಿಧ ಜಿಲ್ಲೆಗಳಿಂದ ಕಬ್ಬನ್ನು ತಂದು ಮಾರಾಟ ನಗರದಲ್ಲಿ ಮಾರಾಟ ಮಾಡುವುದು ಕಂಡು ಬಂತು. ಬೆಲೆ ಏರಿಕೆಯಾಗಿದ್ದರೂ ಗ್ರಾಹಕರು ತಲೆಕೆಡಿಸಿಕೊಳ್ಳದೇ ಖರೀದಿಸಿದರು. ಗ್ರಾಹಕರಲ್ಲಿ ಮಹಿಳೆಯರೇ ಹೆಚ್ಚು ಕಂಡು ಬಂದರು.
ನಗರದ ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ, ಶಾಮನೂರು ರಸ್ತೆ, ನಿಟುವಳ್ಳಿ, ಜಯದೇವ ಸರ್ಕಲ್ನಿಂದ ಪಿ.ಬಿ. ರಸ್ತೆಗೆ ಹೋಗುವ ಮಾರ್ಗಸಹಿತ ವಿವಿಧೆಡೆ ವ್ಯಾಪಾರ ಕಂಡು ಬಂತು. ಎಳ್ಳುಬೆಲ್ಲದ ಪ್ಯಾಕೆಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಹೂವು, ಹಣ್ಣು, ದೀಪದ ಬತ್ತಿ, ರಂಗೋಲಿ ಹುಡಿಗಳನ್ನು ಖರೀದಿಸಿದರು.
ಶಾಮನೂರು ರಸ್ತೆಯಲ್ಲಿ ಒಂದು ಕಬ್ಬಿಗೆ ₹ 50ರಿಂದ ₹70ರವರೆಗೆ ಬೆಲೆ ಇತ್ತು. ನಗರದ ರಾಮ್ ಅಂಡ್ ಕೊ ವೃತ್ತದಲ್ಲಿ ಅಂಗಡಿಯೊಂದರಲ್ಲಿ ಕಾಲು ಕೆ.ಜಿ. ಎಳ್ಳುಬೆಲ್ಲಕ್ಕೆ ₹ 60ರ ವರೆಗೂ ದರವಿತ್ತು. ಕೆಲವು ಕಡೆ ಒಂದು ಕೆ.ಜಿ. ಎಳ್ಳುಬೆಲ್ಲಕ್ಕೆ ₹180ರಿಂದ ₹200ರವರೆಗೂ ಬೆಲೆ ಇತ್ತು.
ವಾರಾಂತ್ಯ ಕರ್ಫ್ಯೂ ಇದ್ದರೂ ಹಬ್ಬದ ಆಚರಣೆಗೆ ತೊಡಕಾಗದಂತೆ ಜನರು ಖರೀದಿಯಲ್ಲಿ ತೊಡಗಿದ್ದರು. ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕೆಲವರು ಕುಟುಂಬದವರ ಜೊತೆ ಶುಕ್ರವಾರವೇ ಪಾರ್ಕ್ಗಳಲ್ಲಿ ಊಟ ಸೇವಿಸಿದರು.
ಸಂಕ್ರಾಂತಿಯ ದಿನವಾದ ಶನಿವಾರ ಬೆಳಿಗ್ಗೆ ಮನೆಯಲ್ಲಿ ಪೂಜೆ ಸಲ್ಲಿಸಿ, ದೇಗುಲಗಳಿಗೆ ಭೇಟಿ ನೀಡಲಿದ್ದಾರೆ, ಸಂಬಂಧಿಕರಿಗೆ, ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಶುಭ ಕೋರಲಿದ್ದಾರೆ.