ದಾವಣಗೆರೆ: ‘ನಾನು ಬೆಳೆದು ಬಂದ ಬಗ್ಗೆ ಎಂ.ಬಿ. ಪಾಟೀಲಗೆ ಏನು ಗೊತ್ತಿದೆ? ಆತ ಇನ್ನೂ ಸಣ್ಣ ಹುಡುಗ, ಮಂಗ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ.
ಗೃಹ ಸಚಿವ ಎಂ.ಬಿ. ಪಾಟೀಲ ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆಗಳಿಗೆ ಶಾಮನೂರು ಶಿವಶಂಕರಪ್ಪ ಭಾನುವಾರಇಲ್ಲಿ ಪ್ರತಿಕ್ರಿಯೆ ನೀಡಿದರು. ‘ಪಾಟೀಲ ಹಾದಿ ತಪ್ಪಿದ್ದ. ನಾನು, ಪ್ರಭಾಕರ ಕೋರೆ ಅವನನ್ನು ಉದ್ಧಾರ ಮಾಡಿದ್ದೇವೆ. ನಾನು ಏನು ಎಂಬುದು ಎಲ್ಲರಿಗೂ ಗೊತ್ತು’ ಎಂದು ಅಸಮಾಧಾನ ಹೊರಹಾಕಿದರು.
‘ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ತು ದಾವಣಗೆರೆಯಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುವಾಗ ಎಲ್ಲಿಯೂ ಪಾಟೀಲನ ಹೆಸರು ಪ್ರಸ್ತಾಪಿಸಿಲ್ಲ. ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನಷ್ಟೇ ಹೇಳಿದ್ದೆ. ನೂರು ವರ್ಷಗಳಿಂದಲೂ ಧರ್ಮ ಮಾನ್ಯತೆಯ ಹೋರಾಟ ನಡೆದಿದೆ. ಇಷ್ಟು ವರ್ಷ ಸುಮ್ಮನೇ ಇದ್ದವರು ಈಗ ಯಾಕೆ ಮಾತನಾಡುತ್ತಿದ್ದಾರೆ’ ಎಂದು ಕೇಳಿದರು.