ದಾವಣಗೆರೆ: ದೇಶದ ಯೋಗ ಪರಂಪರೆಯಲ್ಲಿ ಅಗ್ರಗಣ್ಯರಾಗಿರುವ ಅಥಣಿ ಶಿವಯೋಗಿ ಸ್ವಾಮೀಜಿ ದೇಶ ಕಂಡ ಮಹಾನ್ ಶಿವಯೋಗಿ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ವಿರಕ್ತಮಠದಲ್ಲಿ ಬುಧವಾರ ಸರಳವಾಗಿ ಆಚರಿಸಲಾದ ಅಥಣಿ ಶಿವಯೋಗಿಗಳ 100ನೇ ವರ್ಷದ ಸ್ಮರಣೋತ್ಸವದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಡೆನುಡಿಗಳು ಒಂದಾದ ಬದುಕು ಶಿವಯೋಗಿಗಳದ್ದು. ಅವರು ಬದುಕಿನ ರೀತಿಯಿಂದಲೇ ಬೋಧಿಸಿದರು. ಬಸವತತ್ವಗಳನ್ನು ಪಾಲಿಸಿಕೊಂಡು ಬಂದು ಶ್ರೇಷ್ಠರು. ಸರ್ವ ಜನರನ್ನು ಉದ್ಧರಿಸಿದ ಒಬ್ಬ ಸಮಾಜಯೋಗಿ ಎಂದರು.
ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಎಸ್ಜೆಎಂ ಶಾಲೆಯ ಮುಖ್ಯ ಶಿಕ್ಷಕ ರೋಷನ್, ಫಾರೂಕ್, ಜಗದೀಶ್, ಅಸಗೋಡ ಶಂಭಣ್ಣ, ಶಾಂತಕುಮಾರಿ ಅವರೂ ಇದ್ದರು.