ದಾವಣಗೆರೆ: ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದ ಮಗಳನ್ನೇ ಕೊಂದ ಆರೋಪ ಹೊತ್ತು ಎರಡು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿಯು ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿದ್ದಾರೆ.
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದ ನಿವಾಸಿ ಕಲ್ಲೇಶಪ್ಪ ಆರೋಪ ಮುಕ್ತರಾದವರು. ಸಾಕ್ಷ್ಯಾಧಾರಗಳ ಕೊರತೆಯಿಂದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪು ಆಧರಿಸಿ ಮಂಗಳವಾರ ಸಂಜೆ ಕಲ್ಲೇಶಪ್ಪ ಇಲ್ಲಿನ ಉಪ ಕಾರಾಗೃಹದಿಂದ ಬಿಡುಗಡೆಯಾದರು.
ಕಲ್ಲೇಶಪ್ಪ ಪುತ್ರಿ ಅನಿತಾ, ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದರು. ಮಗಳ ಮದುವೆಗೆ ಅಡ್ಡಿಪಡಿಸಿ ಆಕೆಯನ್ನು ತನ್ನದೇ ಅಡಿಕೆ ತೋಟದಲ್ಲಿ ಹತ್ಯೆ ಮಾಡಿದ ಆರೋಪ ಕಲ್ಲೇಶಪ್ಪನ ಮೇಲಿತ್ತು. 2019ರ ಜ. 30ರಂದು ಅನಿತಾ, ತಮ್ಮ ಅಡಿಕೆ ತೋಟದಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ನಿಗೂಢ ಸಾವಿನ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜಗಳೂರು ಪೊಲೀಸರು, ಮೃತಳ ತಂದೆಯನ್ನು ಬಂಧಿಸಿದ್ದರು. ತನಿಖೆಯ ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಕಲ್ಲೇಶಪ್ಪ ಪರವಾಗಿ ವಕೀಲ ಬಿ. ಸಿದ್ದೇಶ್ವರ ವಾದ ಮಂಡಿಸಿದ್ದರು.