ಹರಿಹರ: ತಾಲ್ಲೂಕಿನ ಕೊಕ್ಕನೂರು ಗ್ರಾಮದ ಹಿಂದೂ ರುದ್ರಭೂಮಿ ಜಾಗವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿದ್ದು, ಜಮೀನಿನ ಸರ್ವೆ ನಡೆಸಿ, ಹದ್ದುಬಸ್ತು ಮಾಡಬೇಕು ಎಂದು ಆಗ್ರಹಿಸಿ ಕೊಕ್ಕನೂರು ಗ್ರಾಮಸ್ಥರು ಶಾಸಕ ಎಸ್. ರಾಮಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಕೆ. ಬಸವರಾಜಪ್ಪ, ‘ಗ್ರಾಮದ ಸರ್ವೆ ನಂ. 33ರಲ್ಲಿ ಪರಿಶಿಷ್ಟ ಜಾತಿಯವರ ಅಂತ್ಯಸಂಸ್ಕಾರಕ್ಕಾಗಿ 2 ಎಕರೆ ರುದ್ರಭೂಮಿ ನಿಗದಿಪಡಿಸ ಲಾಗಿದೆ. ಜಮೀನಿನ ದಾಖಲೆಗಳಿದ್ದರೂ, ಕೆಲವರು ಜಮೀನನ್ನು ಒತ್ತುವರಿ ಮಾಡಿದ್ದಾರೆ’ ಎಂದು ದೂರಿದರು.
ಪ್ರಸ್ತುತ ಗ್ರಾಮದಲ್ಲಿ ಮರಣ ಸಂಭವಿಸಿದರೆ ಶವಸಂಸ್ಕಾರಕ್ಕೆ ಜಾಗ ಇಲ್ಲ. ಈ ಹಿಂದೆ ಹಳ್ಳದ ದಂಡೆ ಮತ್ತು ಚಾನಲ್ ಪಕ್ಕದಲ್ಲಿ ಶವಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಸೇತುವೆ ಕಾಮಗಾರಿ ಚಾಲ್ತಿಯಲ್ಲಿರುವ ಕಾರಣ ಅಂತ್ಯಸಂಸ್ಕಾರ ನಡೆಸಲು ಸ್ಥಳವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.