ಹೊನ್ನಾಳಿ: ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಅವರಿಂದ ಗಲಾಟೆಯಾಗಿದೆಯೇ ಹೊರತು ಸಂಸದ ಡಿ.ಕೆ. ಸುರೇಶ್ ಅವರಿಂದ ಅಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
ಕೊರೊನಾ ಕಾರಣ ಪ್ರತಿಭಟನೆಗೆ ಅವಕಾಶ ನೀಡದಿದ್ದರಿಂದ ಕಾಂಗ್ರೆಸ್ ಮುಖಂಡರು ಹೊನ್ನಾಳಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿನಮೆಗೆ ಹಾರ ಹಾಕಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸಚಿವರು, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಪ್ರಚೋದನಕಾರಿ ಮಾತುಗಳನ್ನು ಆಡಿದರು. ಆದಕಾರಣ ಡಿ.ಕೆ. ಸುರೇಶ್ ಅವರು ವೇದಿಕೆಯಲ್ಲಿ ಮಾತನಾಡಬೇಕಾಯಿತು’ ಎಂದು ಹೇಳಿದರು.
‘ಬಿಜೆಪಿ ಮುಖಂಡರು, ಕಾಂಗ್ರೆಸ್ ಮುಖಂಡರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿ. ಇಲ್ಲದಿದ್ದರೆ ಬಿಜೆಪಿ ವಿರುದ್ಧ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮತ ಕೇಳಿದರೆ, ಹೊನ್ನಾಳಿ ಶಾಸಕರು ಹಣ ಕೊಟ್ಟು ಮತ ಕೇಳುತ್ತಿರುವುದು ಪ್ರಜಾತಂತ್ರಕ್ಕೆ ವಿರುದ್ಧವಾದುದು. ಕೋವಿಡ್ ಪರಿಸ್ಥಿಯನ್ನು ದುರಪಯೋಗ ಮಾಡಿಕೊಂಡು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ದೋಚಿದ ಹಣವನ್ನು ಈಗ ಹಂಚುತ್ತಿದ್ದಾರೆ’ ಎಂದು ದೂರಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ‘ಸಚಿವ ಅಶ್ವತ್ಥನಾರಾಯಣ ಅವರು ಗಂಡಸುತನದ ಬಗ್ಗೆ ಪ್ರಚೋದನಾಕಾರಿಯಾಗಿ ಮಾತನಾಡುವ ಮೂಲಕ ಬಿಜೆಪಿ ಸಂಸ್ಕೃತಿ
ಯನ್ನು ಪ್ರಚಾರ ಪಡಿಸಿದ್ದಾರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆಯಿಂದ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದು ಕಿಡಿ ಕಾರಿದರು.
ಶಾಸಕ ರೇಣುಕಾಚಾರ್ಯ ಅವರು ಕೋವಿಡ್ ಮತ್ತು ಪಕೃತಿ ವಿಕೋಪದ ಪರಿಹಾರ ಹಣವನ್ನು ವಿತರಿಸುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವಳಿ ತಾಲ್ಲೂಕಿನ ಮತದಾರರು ತಕ್ಕಪಾಠ ಕಲಿಸುವರು’ ಎಂದು ಹೇಳಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗದ್ದಿಗೇಶ್, ಹಿರಿಯ ಮುಖಂಡರಾದ ಬಿ. ಸಿದ್ದಪ್ಪ, ಎಚ್.ಬಿ. ಶಿವಯೋಗಿ. ಡಾ.ಈಶ್ವರನಾಯ್ಕ, ಆರ್. ನಾಗಪ್ಪ, ಮಧುಗೌಡ, ಮರಳುಸಿದ್ದಪ್ಪ, ತರಗನಹಳ್ಳಿ ರಮೇಶಗೌಡ, ಕುಳಗಟ್ಟೆ ಶೇಖರಪ್ಪ, ಯುವ ಘಟಕ ಅಧ್ಯಕ್ಷ ಪ್ರಶಾಂತ ಬಣ್ಣಜ್ಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.