ಅನಾಥ ಬಾಲಕಿಯನ್ನು ದತ್ತು ಪಡೆಯಲು ಶಾಸಕ ರೇಣುಕಾಚಾರ್ಯ ನಿರ್ಧಾರ

ಹೊನ್ನಾಳಿ: ಹುಟ್ಟಿದ ಹತ್ತು ತಿಂಗಳಲ್ಲೇ ತಾಯಿಯನ್ನು ಕಳೆದುಕೊಂಡು, ಕೊರೊನಾದಿಂದ ತಂದೆಯನ್ನೂ ಕಳೆದು
ಕೊಂಡ ತಾಲ್ಲೂಕಿನ ದೊಡ್ಡೆರೆಹಳ್ಳಿ ಗ್ರಾಮದ ಬಾಲಕಿ ಯುಕ್ತಿಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ದತ್ತು ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.
ದೊಡ್ಡೆರೆಹಳ್ಳಿ ಗ್ರಾಮದ ನಿತ್ಯಾನಂದ ಹಾಗೂ ರಾಧಾ ಅವರ ಏಕೈಕ ಪುತ್ರಿ ಯುಕ್ತಿ ತಂದೆ–ತಾಯಿಯನ್ನು ಕಳೆದುಕೊಂಡು ಅಜ್ಜಿ ವೀರಮ್ಮ ಅವರ ಆಸರೆಯಲ್ಲಿ ಇದ್ದಾಳೆ. ಅವಳ ಬಗ್ಗೆ ಮಾಹಿತಿ ಪಡೆದ ಶಾಸಕ ಎಂ.ಪಿ. ರೇಣುಕಾಚಾರ್ಯ ದತ್ತು ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.
ತಂದೆ ನಿತ್ಯಾನಂದ ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅಜ್ಜಿ ವೀರಮ್ಮ ಮತ್ತು ಅವರ ಯುಕ್ತಿ ಬೆಂಗಳೂರಿನ ಜೆಪಿ ನಗರದಲ್ಲಿಯೇ ವಾಸವಿದ್ದರು. ಯುಕ್ತಿ ಬೆಂಗಳೂರಿನಲ್ಲಿಯೇ 6 ನೇ ತರಗತಿ ಓದುತ್ತಿದ್ದಳು. ಕೊರೊನಾದಿಂದ ತಂದೆಯನ್ನು ಕಳೆದುಕೊಂಡು ಅಜ್ಜಿಯ ಊರು ದೊಡ್ಡೆರೆಹಳ್ಳಿಯಲ್ಲಿದ್ದಾಳೆ.
ಬಾಲಕಿಯ ಮನೆಗೆ ಭೇಟಿ ನೀಡಿದ ಎಂ.ಪಿ.ರೇಣುಕಾಚಾರ್ಯ ದಂಪತಿ ಬಾಲಕಿಯನ್ನು ಸಂತೈಸಿದರು. ಅಜ್ಜಿ ವೀರಮ್ಮಗೆ ಸಾಂತ್ವನ ಹೇಳಿದರು. ಬಾಲಕಿಯ ಅಜ್ಜಿ ಒಪ್ಪಿದರೆ ದತ್ತು ಪಡೆಯುವುದಾಗಿ ತಿಳಿಸಿದರು.
ಬಾಲಕಿಗೆ ವೈಯಕ್ತಿವಾಗಿ ₹ 25 ಸಾವಿರ ಧನ ಸಹಾಯ ಮಾಡಿದರು. ಸರ್ಕಾರದಿಂದ ಯುಕ್ತಿಯ ಶಿಕ್ಷಣಕ್ಕೆ ಏನು ಬೇಕೋ ಅದನ್ನು ಕೊಡಿಸುವುದಾಗಿ ಭರವಸೆ ನೀಡಿದರು. ಕೋವಿಡ್ನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ನೀಡುವ ₹ 1 ಲಕ್ಷ ಪರಿಹಾರದ ಮೊತ್ತವನ್ನು ಕೊಡಿಸುವ ಭರವಸೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.