ಮಂಗಳವಾರ, ಮಾರ್ಚ್ 28, 2023
33 °C
ಅಂಗನವಾಡಿಯಲ್ಲೇ ಕೈತೋಟ ಬೆಳೆಸಲು ₹ 1ಸಾವಿರ

‘ಅಪೌಷ್ಟಿಕ ತಡೆಗೆ ಪೋಷಣ್ ಮಾಸಾಚರಣೆ ಅಭಿಯಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 5 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪೋಷಣ್ ಮಾಸಾಚರಣೆ’ ಅಭಿಯಾನ ಜಿಲ್ಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ.

‘ಆರೋಗ್ಯ, ನೈರ್ಮಲ್ಯ ವಿಷಯಗಳನ್ನು ಪ್ರತಿ ಮನೆಗೆ ತಿಳಿಸುವುದರ ಜೊತೆಗೆ ಪ್ರತಿ ಮನೆಗೆ ಭೇಟಿ ನೀಡಿ ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರ ಮಕ್ಕಳ ತೂಕ, ಎತ್ತರವನ್ನು ಮಾಪನ ಮಾಡಲಾಗುವುದು. ಅಲ್ಲದೇ ಆರೋಗ್ಯ ತಪಾಸಣೆ, ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು’  ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂಗನವಾಡಿಯಲ್ಲೇ ಕೈತೋಟ: ‘ಜಿಲ್ಲೆಯಲ್ಲಿ 428 ಸರ್ಕಾರಿ ಅಂಗನವಾಡಿ ಕಟ್ಟಡಗಳು ಹಾಗೂ ಕಾಂಪೌಂಡ್‌ಗಳನ್ನು ಗುರುತಿಸಿದ್ದು ಅವುಗಳಲ್ಲಿ ಕೈತೋಟ ಮಾಡಲಿದ್ದು, ಅಲ್ಲಿ ಪಪ್ಪಾಯಿ, ಮೆಂಥ್ಯ, ಕರಿಬೇವು ಸೇರಿ ಪೌಷ್ಟಿಕ ಆಹಾರ ಸಿಗುವ ತರಕಾರಿ ಬೆಳೆಯಲಾಗುವುದು.  ಬಿತ್ತನೆ ಬೀಜ, ಗೊಬ್ಬರ, ಸಸಿಗಳನ್ನು ಕೊಂಡುಕೊಳ್ಳಲು ಪ್ರತಿ ಅಂಗನವಾಡಿಗೆ ₹1 ಸಾವಿರವನ್ನು ಬಾಲವಿಕಾಸ ಸಮಿತಿ ಮುಖಾಂತರ ನೀಡಲಾಗುವುದು’ ಎಂದರು.

ಆರೋಗ್ಯ, ತೋಟಗಾರಿಕೆ ಇಲಾಖೆಗಳು ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಶಾಲೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಕೆಲವು ಕಡೆ ಉದ್ಘಾಟನೆಯಾಗಿದೆ. 11ರಂದು ಕೆಡಿಪಿ ಸಭೆಯಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಅಕ್ಟೋಬರ್ 2ರಂದು ಮೊಬೈಲ್: ಪೋಷಣಾ ಅಭಿಯಾನದ ಮೂಲಕ ಡಿಜಿಟಲ್ ಕಾರ್ಯಕ್ರಮ ನಡೆಯಲಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಮೊಬೈಲ್ ಬಂದಿದ್ದು, ಕೆಲವೇ ದಿನಗಳಲ್ಲಿ ಸಿಮ್ ಬರಲಿದ್ದು, ಅ.2ರಂದು ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ನೀಡಲಾಗುವುದು ಎಂದು ಹೇಳಿದರು.

ನಾಲ್ಕು ಸಭೆ: ‘ಪೋಷಣೆ ಮಾಸಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ಏರ್ಪಡಿಸಿ ಮಕ್ಕಳಲ್ಲಿ ಅಪೌಷ್ಟಿಕತೆ ಗುರುತಿಸಿ ನಕ್ಷೆ ತಯಾರಿಸಿ ಅಂತಹ ಮಕ್ಕಳನ್ನು ಸಾಮಾನ್ಯ ಮಕ್ಕಳ ಸ್ಥಿತಿಗೆ ಮರಳುವಲ್ಲಿ ಸವಾಲುಗಳು ಮತ್ತು ಜರುಗಿಸಬೇಕಾದ ಕ್ರಮಗಳ ಕುರಿತು ಚರ್ಚಿಸಿ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ಡ್ಯಾಶ್ ಬೋರ್ಡ್‌ನಲ್ಲಿ ದಾಖಲು: ‘ಪೋಷಣ್ ಮಾಸಾಚರಣೆಯಲ್ಲಿ ನಡೆಸುವ ಪ್ರತಿಯೊಂದು ಚಟುವಟಿಕೆಯನ್ನು ಕೇಂದ್ರ ಸರ್ಕಾರ ನೀಡಿರುವ ಡ್ಯಾಶ್‌ ಬೋರ್ಡ್‌ನಲ್ಲಿ ದಾಖಲಿಸಲಾಗುತ್ತದೆ. ಪ್ರತಿ ದಿವಸದ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಚಿತ್ರಸಮೇತ ಅಪ್‌ಲೋಡ್ ಮಾಡಲಾಗುವುದು’ ಎಂದರು.

ಪುರಸ್ಕಾರ: ಉತ್ತಮವಾಗಿ ಕೆಲಸ ಮಾಡಿದ ಅಂಗನವಾಡಿ ಶಿಕ್ಷಕರು, ವಿಶೇಷ ಕೈತೋಟ ಬೆಳೆಸಿದರು, ಸಿಡಿಪಿಒ, ಮೇಲ್ವಿಚಾರಕರು, ಎಎನ್ಎಂ, ಎನ್ಎಚ್‌ಗಳನ್ನು ಗುರುತಿಸಿ ಕೇಂದ್ರಮಟ್ಟದಿಂದ ಹಿಡಿದು ರಾಜ್ಯಮಟ್ಟದ ಪುರಸ್ಕಾರಗಳನ್ನು ನೀಡಲಾಗುವುದು’ ಎಂದು ಹೇಳಿದರು.   

ಅಂಕಿ ಅಂಶ

* 332: ಜಿಲ್ಲೆಯಲ್ಲಿ ಗುರುತಿಸಿರುವ ತೀವ್ರ ಅಪೌಷ್ಟಿಕ ಮಕ್ಕಳು

* 11 ಸಾವಿರ: ಮಧ್ಯಮ ಅಪೌಷ್ಟಿಕ ಮಕ್ಕಳು

* ₹2 ಸಾವಿರ: ಅಪೌಷ್ಟಿಕ ಮಕ್ಕಳ ಚಿಕಿತ್ಸೆಗೆ ನೀಡುವ ಹಣ

* ಶೇ 10.91: ಕಳೆದ ವರ್ಷದಲ್ಲಿ ಮಕ್ಕಳ ಪೌಷ್ಟಿಕ ಪ್ರಮಾಣ

* ಶೇ 8.59: ಈ ವರ್ಷದಲ್ಲಿ ಮಕ್ಕಳ ಅಪೌಷ್ಟಿಕ ಪ್ರಮಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು