ಚನ್ನಗಿರಿ: ಹೊರ ವಲಯದ ತಾವರೆಕೆರೆ ಕ್ರಾಸ್ ಬಳಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಮರು ಪ್ರತಿಷ್ಠಾಪನೆ ಮಾಡಲು ಒತ್ತಾಯಿಸಿ ತಾಲ್ಲೂಕು ನಾಯಕ ಸಮಾಜ ಹಾಗೂ ಸ್ವಾಭಿಮಾನಿ ನಾಯಕರ ಯುವ ವೇದಿಕೆಯಿಂದ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಸೋಮವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಕೊಪ್ಪಳದ ವಾಲ್ಮೀಕಿ ಶಾಖಾ ಮಠದ ವರದಾನಂದ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
‘ವಾಲ್ಮೀಕಿ ಪುತ್ಥಳಿಯನ್ನು ತೆರವುಗೊಳಿಸುವ ಮೂಲಕ ಪುರಸಭೆಯವರು ಉದ್ಧಟತನ ತೋರಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಈ ಹೋರಾಟಕ್ಕೆ ಎಲ್ಲ ಸಮುದಾಯವರು ಸಂಪೂರ್ಣ ಬೆಂಬಲ ನೀಡಿರುವುದು ಸ್ವಾಗತಾರ್ಹವಾಗಿದೆ. ವಾಲ್ಮೀಕಿ ಅವರು ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಸಾಂಘಿಕ ಹೋರಾಟದಲ್ಲಿ ಜಯ ಸಿಕ್ಕೇ ಸಿಗುತ್ತದೆ. ಪುರಸಭೆ ಹಾಗೂ ಕಾಣದ ಕೈಗಳ ಕೈವಾಡದಿಂದಾಗಿ ಪುತ್ಥಳಿಯನ್ನು ತೆರವುಗೊಳಿಸಿದ್ದು, ಅ. 21ರೊಳಗೆ ಪುತ್ಥಳಿಯನ್ನು ಮರು ಪ್ರತಿಷ್ಠಾಪನೆ ಮಾಡದೇ ಹೋದರೆ ಬೇರೆ ರೀತಿಯಲ್ಲಿ ಹೋರಾಟವನ್ನು ಮಾಡಬೇಕಾಗುತ್ತದೆ. ಪುರಸಭೆಯವರು ಇದಕ್ಕೆ ಅವಕಾಶ ನೀಡದಂತೆ ಪುತ್ಥಳಿಯನ್ನು ಮರು ಪ್ರತಿಷ್ಠಾಪಿಸಿ ಶಾಂತಿಯನ್ನು ಕಾಪಾಡಲು ಮುಂದಾಗಬೇಕು’ ಎಂದು ವರದಾನಂದ ಸ್ವಾಮೀಜಿ ತಿಳಿಸಿದರು.
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್, ಉಪ್ಪಾರ ಸಮಾಜದ ಮುಖಂಡ ಎಂ.ಯೋಗೇಶ್, ಸ್ವಾಭಿಮಾನಿ ನಾಯಕರ ಯುವ ವೇದಿಕೆ ಅಧ್ಯಕ್ಷ ನವೀನ್, ಚಿಂತಕ ಎ.ಬಿ.ರಾಮಚಂದ್ರಪ್ಪ, ಪುರಸಭೆ ಸದಸ್ಯ ಗಾದ್ರಿ ರಾಜು, ಎನ್.ಲೋಕೇಶಪ್ಪ, ಬುಳುಸಾಗರದ ನಾಗರಾಜಪ್ಪ, ಪಿ.ಬಿ.ನಾಯಕ, ಜಯಣ್ಣ, ಪಿ.ಲೋಹಿತ್ ಕುಮಾರ್ ಉಪಸ್ಥಿತರಿದ್ದರು.