ಹರಪನಹಳ್ಳಿ: ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ ಸಮಾನ ಮನಸ್ಕರ ಬಳಗದ ನೇತೃತ್ವದಲ್ಲಿ ಮಂಗಳವಾರ ಕತ್ತೆಗಳಿಗೆ ಮದುವೆ ಮಾಡಿ ಮೆರವಣಿಗೆ ನೆರವೇರಿಸಲಾಗಿದೆ.
ಆಂಜನೇಯ ದೇವಸ್ಥಾನದ ಆವರಣದಲ್ಲಿ ವಧು-ವರರ ಗುಂಪುಗಳಾಗಿ ವಿಂಗಡಿಸಿ, ಕತ್ತೆಗಳಿಗೆ ಲೈಲಾ ಮಜ್ನು ಎಂದು ನಾಮಕರಣ ಮಾಡಿದ ಬಳಿಕ ಹೊಸ ಬಟ್ಟೆ ಮೈಮೇಲೆ ಹಾಕಿ, ಗ್ರಾಮದ ಪಂಚಾಕ್ಷರಯ್ಯ, ಭರಮಯ್ಯ ಪೌರೋಹಿತ್ಯದಲ್ಲಿ ತಾಳಿ ಕಟ್ಟಿ ಮದುವೆ ಮಾಡಿಸಿದ್ದಾರೆ.
ಬಳಿಕ ಸಮಾಳ ಸೇರಿ ವಿವಿಧ ವಾದ್ಯ ಮೇಳಗಳೊಂದಿಗೆ ಕತ್ತೆಗಳ ಮೆರವಣಿಗೆ ಆರಂಭವಾಯಿತು. ಗ್ರಾಮದ ಬಸವೇಶ್ವರ ಸ್ವಾಮಿ, ಊರಮ್ಮದೇವಿ, ಆಂಜನೇಯ, ಚಾರಿ ದುರುಗಮ್ಮದೇವಿ, ಕೇರಿ ದುರ್ಗಾಂಬಿಕ ದೇವಸ್ಥಾನಗಳಲ್ಲಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಳೆ ಸುರಿದು, ಸಮೃದ್ಧ ಬೆಳೆ ದಯಪಾಲಿಸುವಂತೆ ದೇವರ ಬಳಿ ಹರಕೆ ಕಟ್ಟಿಕೊಂಡರು.
‘ಈ ರೀತಿ ಕತ್ತೆಗಳ ಮದುವೆ ಮಾಡಿದರೆ ಮಳೆ ಸುರಿಯುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಮಳೆರಾಯ ಬಾರದಿದ್ದಾಗ ಈ ಆಚರಣೆ ಮಾಡುತ್ತೇವೆ’ ಎಂದು ಮುಖಂಡರಾದ ಕೆ.ಬಸವರಾಜ್ ಮತ್ತು ರಮೇಶ್ ವಿವರಿಸಿದರು.