ಹೊನ್ನಾಳಿ: ತಾಲ್ಲೂಕಿನ ಹೊಳೆಹರಳಹಳ್ಳಿ ಗ್ರಾಮದಲ್ಲಿ ಭಾನುವಾರ ನೀರು ಕುಡಿಯಲುಬಂದು ಬಲೆಗೆ ಸಿಲುಕಿ ಗಾಯಗೊಂಡಿದ್ದ ಎರಡು ಕರಡಿಗಳನ್ನು ರಕ್ಷಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳುಆನಗೋಡು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿದರು.
ಗ್ರಾಮದ ಭರ್ಮಪ್ಪ ಎಂಬುವವರ ಅಡಿಕೆ ತೋಟದಲ್ಲಿ ಕಾಡು ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿ ಕರಡಿಗಳು ನರಳುತ್ತಿದ್ದವು.ಕರಡಿಗಳನರಳಾಟದ ಸದ್ದು ಕೇಳಿದ ದಾರಿ ಹೋಕರು ತಕ್ಷಣ ಬಂದು ತೋಟದ ಮಾಲೀಕರಿಗೆಸುದ್ದಿ ಮುಟ್ಟಿಸಿದರು.
ಗ್ರಾಮಸ್ಥರೊಂದಿಗೆ ಬಂದ ಭರ್ಮಪ್ಪ, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಡಿಆರ್ಎಫ್ ಶಿವಯೋಗಿ ಅವರು ಸಿಬ್ಬಂದಿಯೊಂದಿಗೆ ಬಂದು ಅರಿವಳಿಕೆ ಮದ್ದು ನೀಡಿ ಕರಡಿಗಳನ್ನು ಸೆರೆಹಿಡಿದರು. ಗಾಯಗೊಂಡಿದ್ದ ಅವುಗಳಿಗೆ ಔಷಧೋಪಚಾರ ಮಾಡಿ ಆನಗೋಡು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.
‘ಗ್ರಾಮದ ಸಮೀಪದಲ್ಲಿ ಕಮಲಾಪುರ ಸಂರಕ್ಷಿತ ಅರಣ್ಯ ಇದೆ. ಇಲ್ಲಿ ಕರಡಿಗಳು ಓಡಾಡುತ್ತವೆ. ತೋಟದ ಮಾಲೀಕರು ಕಾಡು ಹಂದಿ ಬೇಟೆಗೆ ಉರುಳು ಹಾಕಿದ್ದರು. ನೀರು ಕುಡಿಯಲು ಬಂದ ಕರಡಿಗಳು ತೋಟಕ್ಕೆ ನುಗ್ಗಿ ಬಲೆಗೆ ಸಿಲುಕಿರಬಹುದು. ಡಾ. ವಿನಯ್ ಅವರು ಕರಡಿಗಳನ್ನು ಉಪಚರಿಸಿದ್ದು, ಜೀವಕ್ಕೆ ಅಪಾಯವಿಲ್ಲ’ ಎಂದು ಡಿಆರ್ಎಫ್ ಶಿವಯೋಗಿ ತಿಳಿಸಿದರು.
ಹೊನ್ನಾಳಿ, ಮಲೇಬೆನ್ನೂರು, ಹಿರೇಕೆರೂರು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು.
ಹೊಳೆಹರಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ನಾಗರಾಜ್, ಮುಖಂಡರಾದ ಜಗದೀಶ್, ಸುರೇಶಪ್ಪ, ಉಮೇಶ್, ಪೊಲೀಸರು ಹಾಗೂ ಗ್ರಾಮಸ್ಥರ ಸಹಕಾರ ಕಾರ್ಯಾಚರಣೆಗೆ ಸಹಕಾರ ನೀಡಿದ್ದರು.