ದಾವಣಗೆರೆ: ಮಧ್ಯಪ್ರದೇಶದ ಮಂಡಸೌರದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ), ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಮತ್ತು ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಗುರುವಾರ ಜಯದೇವ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದವು.
ಹೆಣ್ಣುಮಕ್ಕಳ ಭದ್ರತೆಯನ್ನು ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಬೇಕು. ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಾಚಾರಗಳಿಗೆ ಪ್ರಚೋದನೆ ನೀಡುತ್ತಿರುವ ಅಂತರ್ಜಾಲ ತಾಣಗಳು, ಸಿನಿಮಾ, ವಿಡಿಯೊಗಳನ್ನು ಬಹಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮಧು ತಿಗಲೇರಿ, ಸೌಮ್ಯಾ, ಭಾರತಿ, ನಾಗಸ್ಮಿತಾ, ಹರಿಪ್ರಸಾದ್, ಗುರು, ಪರಶುರಾಮ್, ಮಂಜುನಾಥ ರೆಡ್ಡಿ, ಆನಂದ್, ಮಂಜುನಾಥ ಕುಕ್ಕವಾಡ, ಶಶಿಕುಮಾರ್, ನಾಗಜ್ಯೋತಿ ಅವರೂ ಇದ್ದರು.