ಹರಿಹರ: ಸೂರ್ಯ ತನ್ನ ಪಥವನ್ನು ಉತ್ತರಕ್ಕೆ ಬದಲಿಸುವ ಸಂಕ್ರಾಂತಿಯ ಸಂದರ್ಭದಲ್ಲಿ ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರದಿಂದ ಆರಂಭವಾದ ಹರಜಾತ್ರೆ ವಿಶೇಷ ಅನುಭಾವವನ್ನು ನೀಡಿತು. ಬೆಳಿಗ್ಗೆ 9ಕ್ಕೆ ಗುರುಪೀಠದಿಂದ 1 ಕಿ.ಮೀ. ದೂರದಲ್ಲಿರುವ ಬೈಪಾಸ್ ವೃತ್ತದಿಂದ ನೂರಾರು ಮಹಿಳೆಯರು ತಲೆ ಮೇಲೆ ಪೂರ್ಣಕುಂಭ, ರೊಟ್ಟಿ, ಬುತ್ತಿ ಹೊತ್ತು ನಡೆಸಿದ ಮೆರವಣಿಗೆ ಹೆದ್ದಾರಿಯ ಸೊಬಗನ್ನು ವೃದ್ಧಿಸಿತ್ತು.
ದಾಸೋಹ: ಪೀಠದ ಆವರಣದಲ್ಲಿ ಬೆಳಿಗ್ಗೆ 8ರಿಂದ ಅನ್ನ ದಾಸೋಹ ಆರಂಭವಾಯಿತು. ಬೆಳಿಗ್ಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನಕ್ಕೆ ಸಂಕ್ರಾಂತಿ ಸ್ಪೆಷಲ್ ಖಡಕ್ ರೊಟ್ಟಿ, ಕಾಳುಪಲ್ಯ, ಗೋಧಿ ಪಾಯಸ, ಅನ್ನ, ಸಾಂಬಾರ್ ವಿತರಿಸಲಾಯಿತು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಬಳ್ಳಾರಿ ಸೇರಿ ನಾಡಿನ ವಿವಿಧೆಡೆಯಿಂದ ಭಕ್ತರು ಬಂದಿದ್ದರು. ಸಂಜೆ ನಾಡಿನ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ರತ್ನ ಕಾರ್ಯಕ್ರಮದ ಮುನ್ನ ನಗರದ ರಾಘವೇಂದ್ರ ಮಠದ ಸಮೀಪದ ತುಂಗಭದ್ರ ನದಿ ದಡದಲ್ಲಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರಾರತಿ ಕಾಮಗಾರಿ ವೀಕ್ಷಿಸಿದರು.