ದಾವಣಗೆರೆ: ಶಾಮನೂರು ಕುಟುಂಬ ಉಚಿತವಾಗಿ ಕೋವಿಡ್ ನಿರೋಧಕ ಲಸಿಕೆ ನೀಡುತ್ತಿದ್ದು, ಲಸಿಕಾ ಕೇಂದ್ರಕ್ಕೆ ಗುರುವಾರ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭೇಟಿ ನೀಡಿದರು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ನಗರದ ಕೆ.ಆರ್. ರಸ್ತೆಯ ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ 9, 11, 12 ಮತ್ತು 14ನೇ ವಾರ್ಡ್ನ ನಾಗರಿಕರು ಲಸಿಕೆ ಪಡೆದರು. ಪಾಲಿಕೆ ಸದಸ್ಯ ಜಾಕೀರ್ ಅಲಿ ಮತ್ತು ಮಾಜಿ ಸದಸ್ಯ ಶಫೀಕ್ ಪಂಡಿತ್ ಕೂಡ ಅದರಲ್ಲಿ ಸೇರಿದ್ದರು.
ಬಾಪೂಜಿ ಆಸ್ಪತ್ರೆ ಮತ್ತು ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿ ಲಸಿಕಾ ಶಿಬಿರ ನಡೆಸಿಕೊಟ್ಟರು. ಲಸಿಕೆ ಪಡೆದವರಿಗೆ ನೀರು ಮತ್ತು ಬಿಸ್ಕತ್ ವಿತರಿಸಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಜಾಕೀರ್ ಅಲಿ, ಸೈಯದ್ ಚಾರ್ಲಿ, ಕೆ.ಚಮನ್ ಸಾಬ್, ಶಫೀಕ್ ಪಂಡಿತ್, ಬುತ್ತಿ ಗೌಸ್, ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ್, ಮುಖಂಡರಾದ ಗಣೇಶ್ ಹುಲ್ಮನಿ, ಬುತ್ತಿ ಗಪೂರ್, ಬರ್ಕತ್ ಅಲಿ ಪೈಲ್ವಾನ್, ಲಾಲ್ ಆರೀಪ್, ದಾದಾಪೀರ್, ಸಲೀಂ, ಅನಿಲ್ಕುಮಾರ್ ಅವರೂ ಇದ್ದರು.
ಉತ್ತರ ಕ್ಷೇತ್ರದಲ್ಲೂ ಆರಂಭ: ಎಸ್ಎಸ್ಎಂ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿಯೂ ಲಸಿಕೆ ಗುರುವಾರದಿಂದ ನೀಡಲಾಗುತ್ತಿದೆ. ನಿಧಾನಕ್ಕೆ ಲಸಿಕಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಈಗಾಗಲೇ 1500 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ಲಸಿಕಾ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಲಾಕ್ಡೌನ್ ಸಡಿಲ ಮಾಡುವ ಬದಲು ಇನ್ನಷ್ಟು ಬಿಗಿ ಮಾಡಬೇಕು. ಜಿಲ್ಲಾಡಳಿತ ನೀಡುವ ಕೊರೊನಾ ಅಂಕಿ ಅಂಶ ಸರಿ ಇದೆ ಎಂದನ್ನಿಸುತ್ತಿಲ್ಲ. ಮೊನ್ನೆ ಒಂದೇ ದಿನ ಜಿಲ್ಲಾ ಆಸ್ಪತ್ರೆಯಲ್ಲಿ 12 ಮಂದಿ ಮೃತಪಟ್ಟಿದ್ದರು. ಬುಲೆಟಿನ್ನಲ್ಲಿ ಒಂದೇ ತೋರಿಸಿದ್ದರು ಎಂದು ಹೇಳಿದರು.
ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ ಎಲ್ಲ ಮುಗಿದ ಮೇಲೆ ಈಗ 18 ವರ್ಷದ ಮೇಲಿನ ಎಲ್ಲರಿಗೂ ಲಸಿಕೆ ಎಂದು ಮೋದಿ ಹೇಳಿದ್ದಾರೆ. ಅದಕ್ಕೂ ಸುಪ್ರೀಂ ಕೋರ್ಟ್ ಚಾಟಿ ಬೀಸಬೇಕಾಯಿತು ಎಂದು ಟೀಕಿಸಿದರು.
‘ಕಪ್ಪು ಶಿಲೀಂಧ್ರಕ್ಕೆ 30–40 ಇಂಜೆಕ್ಷನ್ಗಳಷ್ಟೇ ಇವೆ. ಇನ್ನೂ ಬೇಕಾಗಿದೆ. ಹೆಚ್ಚು ಔಷಧ ಒದಗಿಸುವಂತೆ ಕೋಆರ್ಡಿನೇಟರ್ ಜತೆ ಮಾತನಾಡಿದ್ದೇವೆ. ಇದೆಲ್ಲ ಜಿಲ್ಲಾಡಳಿತ ಮಾಡಬೇಕಾದ ಕೆಲಸ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.