ದಾವಣಗೆರೆ: ರಾಜ್ಯ ಪ್ರದೇಶ ಕುರುಬರ ಸಂಘದ ಅಧ್ಯಕ್ಷರನ್ನಾಗಿ ಮಧ್ಯ ಕರ್ನಾಟಕದಲ್ಲಿರುವ ದಾವಣಗೆರೆಯ ಮುಖಂಡರನ್ನು ಆಯ್ಕೆ ಮಾಡಬೇಕು ಎಂದು ದಾವಣಗೆರೆಯ ಕುರುಬ ಸಮಾಜದ ಮುಖಂಡರು ಒತ್ತಾಯಿಸಿದರು.
‘ಮುಂದಿನ ದಿನಗಳಲ್ಲಿ ಕುರುಬರ ಸಂಘಕ್ಕೆ ಅಧ್ಯಕ್ಷರ ನೇಮಕ ನಡೆಯಲಿದ್ದು, ಮಧ್ಯ ಕರ್ನಾಟಕದ ಭಾಗದವರಿಗೆ ಈ ಸ್ಥಾನ ನೀಡಿದರೆ ಸಂಘವು ಇನ್ನಷ್ಟು ಬಲಗೊಳ್ಳುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಮುಖಂಡರು ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಸಂಘದ ಮುಖಂಡ ಬಿ.ಎಂ. ಸತೀಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಕೆ.ಮಲ್ಲಪ್ಪ ಅವರ ನಂತರ ಈ ಭಾಗದಿಂದ ಯಾರೂ ಸಂಘದ ಅಧ್ಯಕ್ಷರಾಗಿಲ್ಲ. ಆದ್ದರಿಂದ ಆದ್ಯತೆ ನೀಡಬೇಕು. ಈಚೆಗೆ ನಡೆದ ಚುನಾವಣೆಯಲ್ಲಿ ಕೆಂಗೋ ಹನುಮಂತಪ್ಪ, ಎಚ್.ಪಿ.ಪರಶುರಾಮಪ್ಪ, ಪಿ.ರಾಜ್ಕುಮಾರ್ ಹಾಗೂ ಸುನಂದಮ್ಮ ಅವರು ಆಯ್ಕೆಯಾಗಿದ್ದಾರೆ. ಇವರಲ್ಲಿ ಸಮರ್ಥರಾಗಿರುವವರಿಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.
‘ಈಚೆಗೆ ನಡೆದ ಕುರುಬರ ಸಂಘದ ಚುನಾವಣೆಗೆ 23 ಮಂದಿ ಆಕಾಂಕ್ಷಿಗಳು ಇದ್ದರು. ಆದರೆ ಎಲ್ಲರನ್ನು ಒಂದೆಡೆ ಸೇರಿಸಿ ಅವಿರೋಧ ಆಯ್ಕೆ ಮಾಡುವಂತೆ ಮನವಿ ಮಾಡಿದೆವು. ಆ ವೇಳೆ 15 ಮಂದಿ ಹಿಂದೆ ಸರಿದಿದ್ದರು. ಆಗ ಚುನಾವಣೆ ನಡೆಯಿತು. ಮುಂದಿನ ದಿನಗಳಲ್ಲಿ ಅವಿರೋಧ ಆಯ್ಕೆ ನಡೆಯಬೇಕಿದೆ’ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರು ವಿರೂಪಾಕ್ಷಪ್ಪ ಮಾತನಾಡಿ, ‘ಕೆಂಗೊ ಹನುಮಂತಪ್ಪ ಅವರನ್ನು ಕರ್ನಾಟಕ ಕುರುಬ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಕುರುಬ ಸಮಾಜದಲ್ಲಿ ಹಿರಿಯರ ಮುಖಂಡರಿಗೆ ಗೌರವ ನೀಡಬೇಕು. ಒಗ್ಗಟ್ಟಾಗಿ ಕೆಲಸ ಮಾಡಬೇಕು ಹೇಳಿದರು.
‘ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದ್ದು, ಅಲ್ಲಿ ಅಪಘಾತಗಳಾಗುತ್ತಿವೆ. ಜನಪ್ರತಿನಿಧಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ, ಮುದಹದಡಿ ದಿಳ್ಯೆಪ್ಪ, ಎಚ್.ಪಿ.ಗೋಣೆಪ್ಪ, ಎಚ್.ಸಿ. ಹನುಮಂತಪ್ಪ, ಎಚ್.ಸಿ. ಸಂಗಪ್ಪ, ಕೆ. ಪರಶುರಾಮಪ್ಪ, ಚೌಡಪ್ಪ, ಅಥಣಿ ಸಿದ್ದಪ್ಪ, ದ್ಯಾಮಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.