ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ಬಡಾವಣೆ, ಆಜಾದ್ ನಗರ ಭಾಗದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ಭಾನುವಾರ ನಡೆದಿದೆ.
ನಂದೀಶ್ವರ ಬಡಾವಣೆಯ ಬಾಲಕಿ ಅರ್ಚನಾ ಕಣ್ಣು ಹಾಗೂ ತಲೆ ಭಾಗಕ್ಕೆ ಕಚ್ಚಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ದಾವಣಗೆರೆಗೆ ಕಳುಹಿಸಿಕೊಡಲಾಗಿದೆ.
ನಾಯಿ ದಾಳಿ ಮಾಡುತ್ತಿದ್ದಂತೆ ಪೋಷಕರು ನಾಯಿಯನ್ನು ಹೊಡೆದೋಡಿಸಿದ್ದಾರೆ. ನಂತರ ಸೈಯದ್ ಆಜಾದ್, ಮಲ್ಲಿಕ್ ರೆಹಾನ್, ಮಹ್ಮದ್ ಗೌಸ್, ಫೈಜಾನ್ ಖಾನ್, ಅಹ್ಮದ್ ರಜಾಕ್ ಅವರಿಗೂ ಕಚ್ಚಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಜೆ ಯುವಕರ ಗುಂಪು ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.
ಪಟ್ಟಣದ ಸಂತೆ ಮೈದಾನ ಹಾಗೂ ಹರಿಹರ ರಸ್ತೆ ಹಾಗೂ ನಿಟ್ಟೂರು ರಸ್ತೆಯ ಫಿಷ್ ಫ್ರೈ, ಮಾಂಸದ ಅಂಗಡಿ ಸುತ್ತಮುತ್ತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ ಎಂದು ನಾಗರಿಕರು ದೂರಿದರು.
‘ಬೀದಿ ನಾಯಿ ಸೆರೆ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ಒಬ್ಬರೂ ಬಿಡ್ ಮಾಡಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಟ್ಟಣದ ನಾಗರಿಕರು, ಮೀನು ಮಾಂಸದ ಅಂಗಡಿಯವರು ಮಾಂಸದ ಚೂರು, ತ್ಯಾಜ್ಯವನ್ನು ಮೋರಿಗಳಿಗೆ ಹಾಕಬಾರದು. ಪುರಸಭೆ ಕಸ ಸಂಗ್ರಹ ವಾಹನಕ್ಕೆ ಹಾಕಬೇಕು’ ಎಂದು ಮನವಿ ಮಾಡಿದರು.