ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಗ್ರಾಸವಾದ ಟ್ರಕ್ ಟರ್ಮಿನಲ್‌

ಎಎಸ್‌ಪಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ
Last Updated 8 ಜೂನ್ 2020, 16:21 IST
ಅಕ್ಷರ ಗಾತ್ರ

ದಾವಣಗೆರೆ: 25 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಟ್ರಕ್ ಟರ್ಮಿನಲ್ ನಿರ್ಮಾಣ ಯೋಜನೆ ಸೋಮವಾರ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌ ಅಧ್ಯಕ್ಷತೆಯಲ್ಲಿ ಎಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಈ ವಿಚಾರ ಪ್ರಸ್ತಾಪಿಸಿದರು. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಲೇ ಇಲ್ಲ. ಸ್ಥಳ ಪರಿಶೀಲಿಸಲು ಜಿಲ್ಲಾಧಿಕಾರಿ ಮೂಲಕ ಟ್ರಕ್ ಟರ್ಮಿನಲ್‌ನ ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.

ಹಿಂದಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ನಡಾವಳಿಯಲ್ಲಿನ ಆದೇಶದಂತೆ ಹಳೇ ಬಾತಿ ಗ್ರಾಮದಲ್ಲಿ 5 ಎಕರೆ 8 ಗುಂಟೆ ಜಮೀನನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರ್‌ಟಿಒ, ತಹಶೀಲ್ದಾರ್ ಮತ್ತು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಫೆಬ್ರುವರಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬಳಿಕ ಕೊರೊನಾದಿಂದಾಗಿ ಹಿನ್ನಡೆಯಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ. ಬಣಕಾರ ವಿವರಿಸಿದರು.

ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುತ್ತಿರುವುದು ಲಾರಿ, ಬಸ್ಸುಗಳಿಂದ ಅಲ್ಲ, ದ್ವಿಚಕ್ರ ವಾಹನಗಳಿಂದ. ದ್ವಿಚಕ್ರ ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಬೈಕ್‌ ಹೇಗೆ ಚಲಾಯಿಸುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸಬೇಕು. ರಾತ್ರಿ ಓಡಾಡುವ ಎತ್ತಿನಗಾಡಿಗಳಿಗೆ ರಿಫ್ಲೆಕ್ಟರ್‌ ಅಳವಡಿಸಬೇಕು ಎಂದು ಸೈಫುಲ್ಲಾ ಸಲಹೆ ನೀಡಿದರು.

ರಿಫ್ಲೆಕ್ಟರ್‌ ಅಳವಡಿಸುವ ಬಗ್ಗೆ ಪೊಲೀಸ್‌ ಇಲಾಖೆ ಆಂದೋಲನ ನಡೆಸಿ ಅರಿವು ಮೂಡಿಸಿತ್ತು ಎಂದು ಎಎಸ್‌ಪಿ ರಾಜೀವ್‌ ನೆನೆಪಿಸಿದರು.

ವಾಹನ ಚಾಲನೆಯ ಬಗ್ಗೆ ಅರಿವಿಲ್ಲದ ಚಾಲಕರ ಡಿಎಲ್‌ ಅನ್ನು ಅಮಾನತಿನಲ್ಲಿಡಬೇಕು. ಪಾಲಿಕೆ, ಹಳೇ ಬಸ್ ನಿಲ್ದಾಣ, ಶಾಮನೂರು ರಸ್ತೆಯಲ್ಲಿ ಡಿವೈಡರ್ ಇಲ್ಲ. ಜೊತೆಗೆ ಅಲ್ಲಿ ಲೈಟ್‌ಗಳೂ ಇಲ್ಲ ಎಸ್‌ಪಿ ಕಚೇರಿ ಮುಂಭಾಗ ರಸ್ತೆ ಕಾಮಗಾರಿ ತುರ್ತಾಗಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್‌ ಸಲಹೆ ನೀಡಿದರು.

ಜಲಸಿರಿ ಯೋಜನೆಯಡಿ ಹಾಕಲಾಗಿರುವ ಪೈಪ್‌ಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಎಂಡ್ ಕ್ಯಾಪ್ ಹಾಕಿಲ್ಲ. ಹಾಗಾಗಿ ದ್ವಿಚಕ್ರವಾಹನಗಳು ಇದಕ್ಕೆ ಬಡಿದಿವೆ. ಅದನ್ನು ಕೂಡಲೇ ಮುಚ್ಚಬೇಕು ಎಂದು ಬಸ್ ಮಾಲೀಕರ ಸಂಘದ ಖಜಾಂಚಿ ಮಹೇಶ್ ಒತ್ತಾಯಿಸಿದರು.

ಡಿವೈಡರ್ ಕೆಲಸ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಇನ್ನು ಆರಂಭಿಸಲಾಗುವುದು. ಜಲಸಿರಿ ಯೋಜನೆಯ ಪೈಪ್‌ಗಳಿಗೆ ಹೈಡ್ರೋ ಟೆಸ್ಟಿಂಗ್‌ಗಾಗಿ ಕ್ಯಾಪ್ ಹಾಕಿಲ್ಲ. ಶೀಘ್ರ ಹಾಕಲಾಗುವುದು ಎಂದು ಸ್ಮಾರ್ಟ್‌ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಮಲ್ಲಾಪುರ ಮಾಹಿತಿ ನೀಡಿದರು.

ತೊಗರಿ, ರಾಗಿ ಹುಲ್ಲು ಟೈರ್‌ಗಳಿಗೆ ಸಿಕ್ಕಿಹಾಕಿಕೊಂಡು ಸ್ಕಿಡ್ ಆಗಿ ರಸ್ತೆ ಅಪಘಾತ ಹೆಚ್ಚಾಗಿ ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಬಸ್ ಮಾಲೀಕರ ಸಂಘದ ಸದಸ್ಯ ಸುರೇಶ್ ಆಗ್ರಹಿಸಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ, ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT