ಹರಿಹರ:ನಗರದ ಎಪಿಎಂಸಿ ಮಾರುಕಟ್ಟೆ ಆವರಣದ ಗೋದಾಮಿನ ಬಳಿ ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಕಿಟ್ಗಳನ್ನು ಪಡೆಯಲು ಬುಧವಾರ ಸಾವಿರಾರು ಕಾರ್ಮಿಕರು ಏಕಾಏಕಿ ನುಗ್ಗಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ಹಂಚುತ್ತಿರುವ ಮಾಹಿತಿ ತಿಳಿದ ಕೂಡಲೇ ನಗರ ಹಾಗೂ ಗ್ರಾಮಾಂತರ ಪ್ರದೇಶದಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹಂಚಿಕೆಗೆ ಕಾರ್ಮಿಕ ಇಲಾಖೆಯಿಂದ ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ಗೊಂದಲ ಸೃಷ್ಟಿಯಾಯಿತು.
ನೂರಾರು ಜನರು ಏಕಾಏಕಿ ನುಗ್ಗಿದರು. ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ನೂಕುನುಗ್ಗಲಿನಲ್ಲಿ ಇಬ್ಬರು ಕಾರ್ಮಿಕರು ಚರಂಡಿಯಲ್ಲಿ ಬಿದ್ದು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಮಿಕ ಇಲಾಖೆ ಅಧಿಕಾರಿ ಕವಿತಾ, ‘ತಾಲ್ಲೂಕಿನಲ್ಲಿ ಒಟ್ಟು 17,895 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, 5 ಸಾವಿರ ಕಿಟ್ಗಳು ಮಂಜೂರಾಗಿವೆ. ಶಾಸಕರು ಹೆಚ್ಚುವರಿ ಕಿಟ್ಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಕಿಟ್ಗಳು ಬಂದ ನಂತರ ವಿತರಿಸಲಾಗುವುದು’ ಎಂದರು.
ಕಟ್ಟಡ ಕಾರ್ಮಿಕ ಬಸವರಾಜ್, ‘ಇಲಾಖೆ ಸಂಘ-ಸಂಸ್ಥೆಗಳಿಗೆ ಕಿಟ್ ವಿತರಿಸುವ ಜವಾಬ್ದಾರಿ ನೀಡಿರುವ ಕಾರಣ ಸಮಸ್ಯೆಯಾಗಿದೆ’ ಎಂದರು.
ಇಲಾಖೆಯ ಬೇಜವಾಬ್ದಾರಿಯಿಂದ ಕಾರ್ಮಿಕರು ಗಾಯಗೊಂಡಿದ್ದಾರೆ. ಇನ್ನಾದರೂ ಮಾಹಿತಿ ನೀಡುವ ಜತೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.