ಕುಳಗಟ್ಟೆ(ಸಾಸ್ವೆಹಳ್ಳಿ): ವೀರ ಮದಕರಿ ನಾಯಕ ಶೌರ್ಯ, ಸಾಹಸಕ್ಕೆ ಹೆಸರಾಗಿದ್ದು, ಅವರು ಯುವ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೊಟ್ಯಾಪುರ ಹಿರೇಮಠದ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದ ಸರ್ಕಲ್ನಲ್ಲಿ ನಾಯಕ ಸಮುದಾಯದವರು ₹ 12 ಲಕ್ಷ ಅಂದಾಜು ವೆಚ್ಚದಲ್ಲಿ ವೀರ ಮದಕರಿ ನಾಯಕನ 5 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರೆವೇರಿಸಿ ಅವರು ಮಾತನಾಡಿದರು.
ಚಿತ್ರದುರ್ಗದ ಇತಿಹಾಸದಲ್ಲಿ ವೀರ ಮದಕರಿ ನಾಯಕ, ಬಿಚ್ಚುಗತ್ತಿ ಭರಮಣ್ಣ ಸೇರಿ ಮದಕರಿಯ ನಾಯಕರ ವಂಶದಲ್ಲಿ ಒಟ್ಟು 11 ಜನ ರಾಜರು ಆಡಳಿತ ನಡೆಸಿ ಹೋಗಿದ್ದಾರೆ. ಅವರ ಕಾಲದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದವು. ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಕೆರೆ ಕಟ್ಟೆಗಳನ್ನು ನಿರ್ಮಿಸಿದರು. ಅವರು ಇಂದಿಗೂ ಮಾದರಿ ಎಂದು ತಿಳಿಸಿದರು.
ಉತ್ತಮ ಆಡಳಿತ ನೀಡುವುದರ ಜೊತೆಗೆ ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡಿದರು. ಅವರ ಕಾರ್ಯ ವೈಖರಿಗೆ ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ನಿರ್ಮಿಸಿರುವ ಅನೇಕ ಕಲ್ಯಾಣಿಗಳೇ ಸಾಕ್ಷಿಯಾಗಿ ಇಂದಿಗೂ ಗೋಚರಿಸುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಲ್. ರಂಗನಾಥ, ಮುಖಂಡ ರಾದ ಎಂ.ಎಆರ್. ಹನುಮಂತಪ್ಪ, ಕಿಚಡಿ ರಾಜಣ್ಣ, ಎಂ.ಕೆ. ನಾಗರಾಜ್, ಗುರುಮೂರ್ತಯ್ಯ ಇದ್ದರು.