ದಾವಣಗೆರೆ:ಚನ್ನಗಿರಿ ತಾಲ್ಲೂಕಿನ ಸೇವಾನಗರದಲ್ಲಿರುವ ರೆಗ್ಯುಲೇಟರಿ-2 ನಾಲೆ ನಿರ್ವಹಣಾ ಕೇಂದ್ರಕ್ಕೆ ಕಾಡಾ ಅಧಕ್ಷೆ ಪವಿತ್ರ ರಾಮಯ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
‘ಭತ್ತ, ರಾಗಿ ಬೆಳೆ ಕಟಾವು ಮಾಡುವ ಸಮಯ ಹತ್ತಿರದಲ್ಲಿದ್ದು, ಈಗ ನೀರಿನ ಅವಶ್ಯಕತೆ ಇರುತ್ತದೆ. ರೈತರು ವಿವಿಧೆಡೆ ಸಾಲ ಮಾಡಿ ಬೇಸಾಯ ಮಾಡಿದ್ದು, ಅವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
‘ನೀರಿನ ಗೇಜ್ ಪ್ರತಿಬಾರಿ 13.2 ಅಡಿ ಇದ್ದರೆ ಮಾತ್ರ ಅಚ್ಚುಕಟ್ಟಿನ ಕೊನೆಯ ಭಾಗಗಳಿಗೆ ಸರಾಗವಾಗಿ ನೀರು ತಲುಪುತ್ತದೆ. ಆದರೆ ನೀರಿನ ಏರಿಳಿತದಿಂದ ಎರಡು ದಿನಗಳಿಂದ ದಾವಣಗೆರೆ ಹಾಗೂ ಮಲೇಬೆನ್ನೂರು ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಗ್ರಾಮಗಳಿಗೆ ನೀರಿನ ನಿರ್ವಹಣೆಯಲ್ಲಿ ತೊಂದರೆಯಾಗಿತ್ತು. ತಕ್ಷಣವೇ ಅಧಿಕಾರಿಗಳೊಂದಿಗೆ ಜಲಾಶಯದ ನೀರು ವಿಭಜಿಸುವ ರೆಗ್ಯುಲೇಟರಿ-2 ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಧಿಕಾರಿಗಳು ಗೇಜ್ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ಡಿ.ಬಿ.ಹಳ್ಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ, ದಾವಣಗೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರುದ್ರೇಶ್ ನಾಯ್ಕ್, ಕಿರಿಯ ಸಹಾಯಕ ಎಂಜಿನಿಯರ್ ಇದ್ದರು.