ಬೆಂಗಳೂರು: ಚಂದ್ರಗ್ರಹಣ ಉಂಟಾಗಿದ್ದ ಬುಧವಾರ ಸಂಜೆ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಿದ್ದು, ಸಂಚಾರ ಪೊಲೀಸರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ, ‘ರಾತ್ರಿ 7.53 ಗಂಟೆಗೆ ಐಟಿ ನಗರದ ಎಲ್ಲ ಮಾರ್ಗಗಳು ಗೂಗಲ್ ಮ್ಯಾಪ್ನಲ್ಲಿ ಹಸಿರು ಬಣ್ಣ ತೋರಿಸುತ್ತಿವೆ. ಇದನ್ನು ನಂಬಲಾಗುತ್ತಿಲ್ಲ. ಇದು ಚಂದ್ರಗ್ರಹಣದ ಪರಿಣಾಮವೇ’ ಎಂದು ಬರೆದಿದ್ದಾರೆ.
‘ನಗರದಲ್ಲಿ ನಿತ್ಯವೂ ವಾಹನಗಳ ಓಡಾಟ ಹೆಚ್ಚಿರುತ್ತದೆ. ಹಲವು ಮಾರ್ಗಗಳಲ್ಲಿ ಅತಿ ಹೆಚ್ಚು ದಟ್ಟಣೆ ಉಂಟಾಗಿ ಗೂಗಲ್ ಮ್ಯಾಪ್ನಲ್ಲಿ ಕೆಂಪು ಬಣ್ಣದ ಗೆರೆಗಳೇ ಅಧಿಕವಾಗಿರುತ್ತವೆ. ಆದರೆ, ಬುಧವಾರ ಈ ಸ್ಥಿತಿ ಭಿನ್ನವಾಗಿತ್ತು’ ಎಂದು ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಚಂದ್ರಗ್ರಹಣವಿದ್ದ ಸಂಜೆ 5.30ರಿಂದ ರಾತ್ರಿ 8.30ರವರೆಗೆ ಯಶವಂತಪುರ, ಮೆಜೆಸ್ಟಿಕ್, ಬಳ್ಳಾರಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳ ಓಡಾಟ ಕಡಿಮೆ ಇತ್ತು. ಆ ಮಾರ್ಗದಲ್ಲೆಲ್ಲ ಹಸಿರು ಗೆರೆಗಳು ತೋರಿಸಿವೆ.