ದಾವಣಗೆರೆ: ಮಾಜಿ ಶಾಸಕ ಪೈಲ್ವಾನ್ ಕೆ. ಮಲ್ಲಪ್ಪ ಅವರ ಸ್ಮರಣಾರ್ಥ ಹಾಗೂ ಪಾಲಿಕೆ ಸದಸ್ಯ ಕೆ.ಎಂ ವೀರೇಶ್ ಹುಟ್ಟುಹಬ್ಬದ ಪ್ರಯುಕ್ತ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕದ ಕಾರ್ತಿಕ್ ಕಾಟೆ ಪ್ರಶಸ್ತಿ ಪಡೆದುಕೊಂಡರು.
24 ಜೋಡಿ ಕುಸ್ತಿ ನಡೆಯಿತು. ಅಂತಿಮ ಪಂದ್ಯದಲ್ಲಿ ಪಂಜಾಬಿನ ಕೇಸರಿ ಅಮಿತ್ ಪೈಲ್ವಾನ್ ಅವರನ್ನು ಕಾಟೆ ಸೋಲಿಸಿದರು. ವಿಜೇತರಿಗೆ ₹ 20 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಯಿತು.
ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ‘ದಾವಣಗೆರೆ ಕುಸ್ತಿಗೆ ಪ್ರಸಿದ್ಧವಾದ ಜಿಲ್ಲೆ. ಕೋವಿಡ್ ಕಾರಣದಿಂದ ಒಂದು ವರ್ಷ ಕುಸ್ತಿ ಪಂದ್ಯಗಳು ನಡೆದಿರಲಿಲ್ಲ. ಈಗ ಮತ್ತೆ ಆರಂಭಗೊಂಡಿರುವುದು ಉತ್ತಮ ವಿಚಾರ’ ಎಂದು ತಿಳಿಸಿದರು.
₹ 20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೈಲು ನಿಲ್ದಾಣ ನಿರ್ಮಾಣವಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ರೈಲು ನಿಲ್ದಾಣ ದಲ್ಲಿ ಇರುವಂತೆ ಎಸ್ಕಲೇಟರ್ ವ್ಯವಸ್ಥೆ ಯನ್ನು ಅಳವಡಿಸಲಾಗಿದೆ. ಉಪ ವಿಭಾಗಾಧಿ ಕಾರಿ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಸ್ಥಳಾಂತರಿಸಲಾಗುವುದು. ಉಪ ವಿಭಾಗಾಧಿಕಾರಿ ಕಚೇರಿ ಇರುವಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಏಪ್ರಿಲ್ 3ರಂದು ಉದ್ಘಾಟಿಸುವ ಚಿಂತನೆ ಇದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ‘ಕುಸ್ತಿ ಪಂದ್ಯಾವಳಿಯ ಎಲ್ಲ ವಿಭಾಗದ ವಿಜೇತರಿಗೆ ನಗದು ಪ್ರಶಸ್ತಿ ನೀಡಲಾಗಿದೆ’ ಎಂದು ತಿಳಿಸಿದರು.
ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವ ಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಬಿ. ವೀರಣ್ಣ, ಮಾಲತೇಶ್ ಜಾಧವ್, ಕೆ.ಎಂ. ಸುರೇಶ್, ಅಯ್ಯೂಬ್ ಪೈಲ್ವಾನ್ ಪಂದ್ಯಾವಳಿಗಳನ್ನು ವೀಕ್ಷಿಸಿದರು.