ಚನ್ನಗಿರಿ: ನಗರ ದೇವತೆ ಕುಕ್ಕವಾಡ ಅಂಬಾಭವಾನಿ ಮಹಾ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಕ್ಷತ್ರಿಯ ಮರಾಠ ಸಮಾಜದ ಸಹಯೋಗದಲ್ಲಿ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ಬುಧವಾರ ಆರಂಭಗೊಂಡಿತು.
ಪಟ್ಟಣದ ಕುಕ್ಕವಾಡ ಅಂಬಾಭವಾನಿ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ತಾಲ್ಲೂಕು ಕ್ರೀಡಾಂಗಣಕ್ಕೆ ತರಲಾಯಿತು. ನಂತರ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಬಿ. ವೀರಣ್ಣ ಹಾಗೂ ರಾಜ್ಯ ಕುಸ್ತಿ ಸಂಸ್ಥೆ ಜಂಟಿ ಕಾರ್ಯದರ್ಶಿ ಓಂಕಾರ್ ನೇತೃತ್ವದಲ್ಲಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಲಾಯಿತು.
ಮೊದಲನೇ ದಿನವಾದ ಬುಧವಾರ ಹರಿಹರ, ದಾವಣಗೆರೆ, ಜಗಳೂರು, ಹೊನ್ನಾಳಿ, ಹರಪನಹಳ್ಳಿ ತಾಲ್ಲೂಕುಗಳಿಂದ ಜಟ್ಟಿಗಳು ಬಂದಿದ್ದರು. ಗೆದ್ದ ಕುಸ್ತಿಪಟುಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಡಿ. 19 ಮತ್ತು 20 ರಂದು ಹರಿಯಾಣ, ಬೆಳಗಾವಿ, ಧಾರಾವಾಡ, ಹುಬ್ಬಳ್ಳಿ ಮುಂತಾದ ಕಡೆಗಳಿಂದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.
ಪುರಸಭೆ ಸದಸ್ಯರಾದ ಬಿ.ಆರ್. ಹಾಲೇಶ್, ಜಿ. ನಿಂಗಪ್ಪ, ಕುಸ್ತಿಪಟುಗಳಾದ ನಾಗರಾಜ್, ಹನುಮಂತಪ್ಪ, ಕರಡೇರ್ ರಾಮಣ್ಣ, ರಾಜು ಕರಡೇರ್, ಚಿಕ್ಕಪ್ಪ, ಕೆ.ಆರ್. ಗೋಪಿ, ಸಿ.ಎಚ್. ಶ್ರೀನಿವಾಸ್, ಕುಸ್ತಿ ಸಮಿತಿ ಅಧ್ಯಕ್ಷ ಶಿವಾಜಿರಾವ್, ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ್ ಜಾಧವ್, ನಿಂಗೋಜಿರಾವ್ ಉಪಸ್ಥಿತರಿದ್ದರು.