ದಾವಣಗೆರೆ: ಸಾವರ್ಕರ್ ಒಬ್ಬ ಅಪ್ರತಿಮ ದೇಶ ಭಕ್ತನಾಗಿದ್ದು, ಅವರ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡೋದು ಸರಿಯಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದು, ಅವರ ಬಗ್ಗೆ ಗೌರವ ಇದೆ. ಆದರೆ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಾವೇ ದುಷ್ಟರಿಗೆ ಪ್ರಶಸ್ತಿ ನೀಡಿಲ್ಲ. ಒಂದು ವೇಳೆ ದುಷ್ಟರಿಗೆ ಪ್ರಶಸ್ತಿ ಕೊಟ್ಟರೆ ಟೀಕೆ ಮಾಡಬೇಕು. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಮೂಲೆ ಗುಂಪಾಗಿದ್ದು, ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
ಬಿಜೆಪಿ ಎಂದು ಸಹ ಓಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ಗಾಂಧೀಜಿ ನಮಗೆ ಆದರ್ಶ ವ್ಯಕ್ತಿಯಾಗಿದ್ದು, ಅವರ ಕಲ್ಪನೆ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ಓಟಿಗಾಗಿ ರಾಜಕಾರಣ ಮಾಡಬಾರದು. ಟಿಪ್ಪು ಒಬ್ಬ ಮತಾಂಧನಾಗಿದ್ದು, ದೇಶ ದ್ರೋಹಿ ಜಯಂತಿಯನ್ನು ಕಾಂಗ್ರೆಸ್ ಮಾಡಿದೆ. ಮಡಿಕೇರಿಯಲ್ಲಿ ಬೆಂಕಿ ಹಚ್ಚಿ, ಈಗ ಸಿದ್ದರಾಮಯ್ಯ ನೀತಿ ಪಾಠ ಹೇಳುದೋಕ್ಕೆ ಬರುತ್ತಿದ್ದಾರೆ’ ಎಂದು ಹೇಳಿದರು.
‘ಯಡಿಯೂರಪ್ಪ ಪಕ್ಷಾತೀತ ನಾಯಕರಾಗಿದ್ದು, ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಇದ್ದರೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅಮಿತ್ ಷಾ, ನರೇಂದ್ರಮೋದಿ ಅವರು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿ ಸಿಎಂ ಮಾಡಿದ್ದರು. ಶಾಸಕರು, ಎಂಪಿ, ಕಾರ್ಯಕರ್ತರು ಎಲ್ಲ ಒಟ್ಟಿಗೆ ಇದ್ದೇವೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಊಹಾಪೋಹವಷ್ಟೇ. ಯಡಿಯೂರಪ್ಪ ನೇತೃತ್ವದಲ್ಲಿ ಉಪಚುನಾವಣೆ ನಡೆಯುತ್ತದೆ. 2023 ಕ್ಕೆ ಅವರೇ ನಮ್ಮ ಸಿಎಂ. ದೇಶದಲ್ಲಿ ಮೋದಿ ಹೇಗೊ ರಾಜ್ಯದಲ್ಲಿ ಯಡಿಯೂರಪ್ಪ ಹಾಗೆಯೇ’ ಎಂದರು.
ವಿಶ್ವನಾಥ್ ಹಾಗೂ ಸಾರಾ ಮಹೇಶ್ ಆಣೆ ಪ್ರಮಾಣ ವಿಚಾರ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ‘ವಿಶ್ವನಾಥ್ ಬಗ್ಗೆ ಸಾರಾ ಮಹೇಶ್ ಲಘು ಹೇಳಿಕೆ ನೀಡುವುದು ಸರಿಯಲ್ಲ. ವಿಶ್ವನಾಥ್ ಹಿರಿಯ ರಾಜಕಾರಣಿ ಆಣೆ ಪ್ರಮಾಣಕ್ಕೆ ಕರೆಯುವುದು ಸಮಂಜಸವಲ್ಲ. ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಇನ್ನು ಎಷ್ಟು ಜನ ಹೊರಗೆ ಹೋಗ್ತಾರೆ ನೋಡಿ’ ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧ ಉಮೇಶ್ ಕತ್ತಿ ವಾಗ್ದಾಳಿ ಹಿನ್ನೆಲೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ‘ಕತ್ತಿಯವರು ನಮ್ಮ ಪಕ್ಷದ ಮುಖಂಡರು ಸಂತೋಷ ಪಡ್ತೇನೆ. ಅವರಿಗೆ ಬಿಜೆಪಿ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನ ಮಾನ ನೀಡುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.