ಹರಪನಹಳ್ಳಿ: ದೇಶದ ಎಲ್ಲೆಡೆ ಕೊರೊನಾ ಮೂರನೇ ಅಲೆಯ ಬಗ್ಗೆಯೇ ಚರ್ಚೆ ನಡೆಯುತ್ತಿರುವ ಮಧ್ಯೆಯೂ ನೀಲಗುಂದ ಗುಡ್ಡದ ವಿರಕ್ತಮಠದ ಆವರಣದಲ್ಲಿ ಶಾಲಾ ಮಕ್ಕಳಿಗೆ ಉಚಿತ ಯೋಗಾಭ್ಯಾಸದ ಪಾಠ ಉಚಿತವಾಗಿ ನಿತ್ಯವೂ ನಡೆಯುತ್ತಿದೆ.
ಗುಡ್ಡದ ವಿರಕ್ತಮಠದಲ್ಲಿ ನಿತ್ಯ ದಾಸೋಹದ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಗ್ರಾಮದಲ್ಲಿರುವ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಸಂಜೆ 6.30ರಿಂದ 8 ಗಂಟೆ ವರೆಗೆ ಅಲ್ಲಿನ ಮುಖ್ಯ ಶಿಕ್ಷಕ ಹೇಮಂತ್ ಅವರು ಉಚಿತವಾಗಿ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳೂ ಅಂತರ ಕಾಯ್ದುಕೊಂಡು ಯೋಗವನ್ನು ಕಲಿಯುತ್ತಿದ್ದಾರೆ.
‘ಈ ವರ್ಷವೂ ಶಾಲಾ ತರಗತಿಗಳು ನಡೆಯುತ್ತಿಲ್ಲ. ಇದರಿಂದ ಶಿಕ್ಷಣದಿಂದ ವಂಚಿತರಾಗುವ ಆತಂಕ ಎದುರಾಗಿದೆ. ಮಠದಲ್ಲಿರುವ ನಿತ್ಯ ದಾಸೋಹದ ವಿದ್ಯಾರ್ಥಿಗಳು ಹಾಗೂ ಗ್ರಾಮದ ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಠಾಧ್ಯಕ್ಷ ಚನ್ನಬಸವ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮುಖ್ಯಶಿಕ್ಷಕ ಹೇಮಂತ್ ಮಾತನಾಡಿ, ‘ಮಕ್ಕಳ ಸದೃಢ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ನಿಯಮಾನುಸಾರ ಯೋಗ ಹೇಳಿ ಕೊಡಲಾಗುತ್ತಿದೆ. ಯಾರಿಗೂ ಒತ್ತಡ ಹೇರುವುದಿಲ್ಲ. ಮಠದ ಸುತ್ತಮುತ್ತಲಿರುವ ಮನೆಗಳ ಮಕ್ಕಳು ಇಲ್ಲಿಗೆ ಬಂದು ಯೋಗಾಭ್ಯಾಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.