ದಾವಣಗೆರೆ: ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಕರವೇ (ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಒತ್ತಾಯಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಇರುವುದರಿಂದ ಕನ್ನಡಿಗರಿಗೆ ಸರ್ಕಾರಿ ಮತ್ತು ಖಾಸಗಿ ಹುದ್ದೆ ಭರ್ತಿಯಲ್ಲಿ ಅನ್ಯಾಯವಾಗುತ್ತಿದೆ.
ಉತ್ತರ ಭಾರತೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ 4700 ಹುದ್ದೆಗಳು ಬಿಹಾರಿಗಳ ಪಾಲಾಗುತ್ತಿದ್ದವು. ಕರವೇ ಹೋರಾಟ ಮಾಡುವ ಮೂಲಕ ಅದನ್ನು ತಡೆದು ಕನ್ನಡಿಗರಿಗೆ ಆ ಹುದ್ದೆಗಳು ದಕ್ಕುವಂತೆ ಮಾಡಿದೆ. ಅದೇ ರೀತಿಯಲ್ಲಿ ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 77 ಸಾವಿರ ಹುದ್ದೆಗಳು ಭರ್ತಿಯಾಗಲಿವೆ. ಈ ಹುದ್ದೆಗಳಿಗೆ ಉತ್ತರ ಭಾರತೀಯರನ್ನು ನೇಮಕ ಮಾಡಿಕೊಳ್ಳುವ
ಹುನ್ನಾರ ನಡೆಯುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ.
ಕೂಡಲೇ, ಸರ್ಕಾರ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಟಿ.ಎ. ನಾರಾಯಣ ಸ್ವಾಮಿ ನೇತೃತ್ವದಲ್ಲಿ ಕರವೇ ರಾಜ್ಯ ಘಟಕ ಸೆ. 25ರಂದು ಬೆಂಗಳೂರಿನಲ್ಲಿ ಬಹತ್ ರ್ಯಾಲಿ ನಡೆಸಿ
ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ರ್ಯಾಲಿಯಲ್ಲಿ 50 ಸಾವಿರ ಜನರು ಭಾಗವಹಿಸಲಿದ್ದಾರೆ. ದಾವಣಗೆರೆ ಯಿಂದ 500 ಜನರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವೀಣಾ ಮಂಜುನಾಥ, ಶಬ್ಬೀರ್ ಅಹಮ್ಮದ್, ಕೆ.ಜಿ. ಬಸವರಾಜ, ಸುರೇಶ್, ನಾಗರಾಜ್, ಪರಶುರಾಮ, ಪರಮೇಶ್ವರ, ವಿಜೇಂದ್ರ, ಗಗನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.