ಭದ್ರಾವತಿ: ‘ಎಲ್ಲಾ ಔಷಧಿ ಆಸ್ಪತ್ರೆಯಲ್ಲೇ ಸಿಗುವಾಗ ಹೊರಗಡೆ ಖರೀದಿಗೆ ಏಕೆ ಚೀಟಿ ಬರೆಯುತ್ತೀರಿ. ಸ್ವಚ್ಛತೆ ಇಲ್ಲದೆ ನಾಗರಿಕರು ಪರದಾಡುವ ಸ್ಥಿತಿ ಇದೆ. ಹೀಗಿದ್ದರೆ ಹೇಗೆ’ ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಆಸ್ಪತ್ರೆಯ ವೈದ್ಯರು, ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಸೋಮವಾರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಆಸ್ಪತ್ರೆಯ ವಿವಿಧ ವಾರ್ಡ್, ಘಟಕ ಹಾಗೂ ನಾಗರಿಕರ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ಅವಲೋಕಿಸಿ ಸಿಬ್ಬಂದಿ ಜತೆಗೆ ಚರ್ಚಿಸಿದರು.
ವಾರ್ಡ್, ಕಾರಿಡಾರ್ ಭಾಗದಲ್ಲಿ ಸ್ವಚ್ಛತೆ ಇಲ್ಲ, ಬೆಳಕು ಇಲ್ಲದೆ ಓಡಾಟ ಮಾಡುವುದೇ ದುಸ್ತರವಾಗಿದೆ. ಸೌಲಭ್ಯ ಇದ್ದರೂ ಅದನ್ನು ನಾಗರಿಕರಿಗೆ ತಲುಪಿಸುವಲ್ಲಿ ವಿಫಲವಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಅಭಿಯಾನ ಸಭೆಯಲ್ಲಿ ತಿಳಿಸಿರುವಂತೆ 27 ಅಂಶದಲ್ಲಿ ಕನಿಷ್ಠ 17 ಅಂಶಗಳ ಮಾನದಂಡ ಪಾಲಿಸಿ ನ್ಯೂನತೆ ಸರಿ ಮಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ ಸುರಗೀಹಳ್ಳಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಗುಡದಪ್ಪ ಕಸಬಿ, ಡಾ. ಶ್ರೀಮತಿ, ಡಾ. ಶ್ರೀಕಾಂತ್, ನೀಲೇಶ್ ಇದ್ದರು.