ದಾವಣಗೆರೆ: ಹರಪನಹಳ್ಳಿ ತಾಲ್ಲೂಕು ಚಿಗಟೇರಿಯ ನಾರದಮುನಿ ಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.ಮಧ್ಯ ಕರ್ನಾಟಕದಲ್ಲಿ ಚಿಗಟೇರಿ ಕ್ಷೇತ್ರ ಪ್ರಸಿದ್ಧವಾಗಿದ್ದು, ಹಲವು ಜಿಲ್ಲೆಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆಯಿಂದಲೇ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ನಾರದ ಮುನಿ ಸ್ವಾಮಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಕ್ಷೇತ್ರದ ಪದ್ಧತಿಯಂತೆ ವಿವಿಧ ಬೆಡಗಿನ ಭಕ್ತರು ಮೀಸಲು ಪದಾರ್ಥಗಳಾದ ಅಕ್ಕಿ, ಬೆಲ್ಲ, ಹಾಲು, ಬಾಳೆಹಣ್ಣಿನ ವಿಶಿಷ್ಟ ಪ್ರಸಾದವನ್ನು ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ಹರಕೆ ಒಪ್ಪಿಸಿದರು.ಸಂಜೆ 5.24ರ ಮೂಲಾ ನಕ್ಷತ್ರದ ವೇಳೆಗೆ ರಥೋತ್ಸವ ಆರಂಭವಾಗುತ್ತಿದಂತೆ ನಾರು ಎಸೆದ ಭಕ್ತರು ಶಿವ ನಾರದ ಮುನಿ ಗೋವಿಂದಾ... ಗೋವಿಂದಾ ಎಂದು ಉದ್ಘಾರ ಘೋಷ ಹಾಕಿದರು.
ನಾರುಗುಳ್ಳೆ ಇರುವ ವ್ಯಕ್ತಿಗಳು ಇಲ್ಲಿಗೆ ಬಂದು ನಾರು ಎಸೆದು ಹರಕೆ ತೀರಿಸಿದರೆ, ನಾರುಗುಳ್ಳೆ ವಾಸಿಯಾಗುತ್ತವೆ ಎಂಬ ಪ್ರತೀತಿ ಇದೆ.ನಾರದಮುನಿ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ, ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ಷಡಾಕ್ಷರಪ್ಪ, ಜಯಣ್ಣ, ಕರಿಬಸವಣ್ಣ, ರಾಮನಗೌಡ್ರು, ಚನ್ನಬಸವನಗೌಡ್ರು, ಶಾಮನೂರು ಬಸಣ್ಣ ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.