ದಾವಣಗೆರೆ: ‘ಪ್ರಪಂಚವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ನಾವು ನೋಡುವಂತಹ ದೃಷ್ಟಿಕೋನ ಬದಲಾಗಬೇಕಿದೆ’ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರದ ಚಿಂದೋಡಿ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮ್ಮ ಮಕ್ಕಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಆಲೋಚನೆ ಹೇಗೆ ಇರುತ್ತದೆಯೋ ಹಾಗೆಯೇ ಸಮಾಜ ಕಾಣುತ್ತದೆ. ನಮ್ಮ ಚಿಂತನೆಗಳು ಉತ್ತಮವಾಗಿರಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ಕಾಣಲು ಸಾಧ್ಯ’ ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ರೂಪ್ಲಾನಾಯ್ಕ ಮಾತನಾಡಿ, ‘ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಹಾಗೂ ಪೋಷಿಸುವಂತಹ ನಿರಂತರವಾದ ವೇದಿಕೆಯನ್ನು ನಿರ್ಮಿಸುವ ಅವಶ್ಯವಿದೆ’ ಎಂದರು.
‘ಧಾವಂತದ ಬದುಕಿನಿಂದಾಗಿ ತಂದೆ– ತಾಯಿ ಹಾಗೂ ಪೋಷಕರು ಬಿಡುವಿಲ್ಲದೇ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಇದರಿಂದಾಗಿ ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳು ಒಂಟಿಯಾಗುತ್ತಿದ್ದಾರೆ. ಜತೆಗೆ ಮಕ್ಕಳು ಬೇರೆ ಬೇರೆ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಈಚೆಗೆ ಧಾರಾವಾಹಿಯೊಂದರ ಪಾತ್ರಧಾರಿಯನ್ನು ಅನುಕರಣೆ ಮಾಡುವ ಮೂಲಕ ಹರಿಹರದಲ್ಲಿ 7 ವರ್ಷದ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರ ತಂದಿದೆ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು’ ಎಂದರು.
‘ಮಕ್ಕಳನ್ನು ಓದಿಸುವಾಗ, ಊಟ ಮಾಡುವಾಗ ತಂದೆ, ತಾಯಿ ಹಾಗೂ ಪೋಷಕರು ಹಿಂಸೆಯನ್ನು ಪ್ರತಿಬಿಂಬಿಸುವಂತಹ ಧಾರಾವಾಹಿ, ಚಲನಚಿತ್ರಗಳನ್ನು ನೋಡಬಾರದು. ಇವುಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ’ ಎಂದು ಸಲಹೆ ನೀಡಿದರು. ‘ಮಕ್ಕಳು ಮನೆಯಲ್ಲಿ ಒಂಟಿಯಾಗದಂತೆ ನೋಡಿಕೊಳ್ಳಬೇಕು. ತಂದೆ, ತಾಯಿಗಳು ಎಚ್ಚರವಹಿಸಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, ‘ಈ ಕಾರ್ಯಕ್ರಮವು ಇಲಾಖೆಯ ಆಶ್ರಯದಲ್ಲಿ ಬೆಳೆಯುತ್ತಿರುವ ಮಕ್ಕಳ ಕಾರ್ಯಕ್ರಮವಾಗಿದೆ. ಇದರಿಂದಾಗಿಯೇ ‘ನಮ್ಮ ಮಕ್ಕಳ ದಿನಾಚರಣೆ’ ಎಂದು ಇಲಾಖೆಯ ಸಿಬ್ಬಂದಿಯೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದೇವೆ’ ಎಂದು ಹೇಳಿದರು.
‘ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಾಲಭವನವನ್ನು ಡಿಸೆಂಬರ್ನಲ್ಲಿ ಉದ್ಘಾಟಿಸಲಾಗುವುದು. ಜತೆಗೆ ಪುಟಾಣಿ ರೈಲು ಕೂಡ ಸಿದ್ಧವಾಗಿದ್ದು, ಅದಕ್ಕೂ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಅಂಧಮಕ್ಕಳ ಸರ್ಕಾರಿ ಶಾಲೆ ಹಾಗೂ ಬಾಲಕ, ಬಾಲಕಿಯರ ಸರ್ಕಾರಿ ಬಾಲಮಂದಿರದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಂಧ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಡಾ.ಕೆ.ಕೆ.ಪ್ರಕಾಶ್ ಸ್ವಾಗತಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಎಂ.ವೀಣಾ, ವೈ.ಯಶೋದಮ್ಮ, ದೊಗ್ಗೊಳ್ಳಿ ಪುಟ್ಟರಾಜು ಹಾಗೂ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿನಿ ಈರಮ್ಮ, ವಿದ್ಯಾರ್ಥಿಗಳಾದ ಸಿದ್ದೇಶ್, ಪರಮೇಶ್, ಮಾನಸ ಅವರೂ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.