ಧಾರವಾಡ: ‘ಬಸವಣ್ಣನವರಿಗಿಂತ ಮೊದಲು ದೇವರ ದಾಸೀಮಯ್ಯ ವಚನಗಳನ್ನು ಬರೆದಿದ್ದಾರೆ ಎಂದು ಕೆಲ ಸಾಹಿತಿಗಳು ಹೇಳುತ್ತಿದ್ದಾರೆ. ಆದರೆ, ಆ ಹೇಳಿಕೆ ಸರಿಯಲ್ಲ. ಆದರೆ ದಾಸೀಮಯ್ಯ ವಚನಗಳನ್ನು ಬರೆಯಲಿಲ್ಲ. ಅವರು ಬರೀ ಶಿವಭಕ್ತರಾಗಿದ್ದರು’ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
ಶುಕ್ರವಾರ ಇಲ್ಲಿ ಆರಂಭವಾದ ಐದನೇ ವರ್ಷದ ಶರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ವಚನಗಳು ಎಂಬ ವಿನೂತನ ಸಾಹಿತ್ಯ ಪದ್ಧತಿಯನ್ನು ಪ್ರಾರಂಭ ಮಾಡಿದವರೇ ಬಸವಣ್ಣನವರು. ಅವರಿಗಿಂತ ಮೊದಲು ಇಂತಹ ಸಾಹಿತ್ಯ ಪ್ರಕಾರ ಇರಲಿಲ್ಲ. ಇದನ್ನು ಸಾಹಿತಿ–ಸಂಶೋಧಕರು ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ನೇಕಾರ ಸಮುದಾಯಕ್ಕೆ ಸೇರಿದ ದಾಸೀಮಯ್ಯ ಬಸವಣ್ಣನವರಿಗಿಂತ ಹಿರಿಯರು. ಆದರೆ, ದಾಸೀಮಯ್ಯನವರ ಪತ್ನಿ ದುಗ್ಗಳೆ ವಚನಗಳನ್ನು ಬರೆದಿದ್ದಾರೆ. ಅವರ ವಚನಗಳಲ್ಲಿ ಬಸವಣ್ಣನವರ, ಅಕ್ಕಮಹಾದೇವಿ ಮುಂತಾದ ಶರಣರ ಹೆಸರು ಉಲ್ಲೇಖವಾಗಿವೆ. ದಾಸೀಮಯ್ಯ ಅನುಭವ ಮಂಟಪದ ಸದಸ್ಯರಾಗಿದ್ದಾರೆ ಎಂದು ದಾಖಲಾಗಿದೆ. ಆದರೆ, ವಚನಗಳನ್ನು ಬರೆದಿಲ್ಲ’ ಎಂದು ಹೇಳಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ‘ಬಸವತತ್ವ ಪ್ರಚಾರ ಮಾಡುವಲ್ಲಿ ಡಾ.ಹರ್ಡೇಕರ ಮಂಜಪ್ಪ, ಮುರುಘಾಮಠದ ಮೃತ್ಯುಂಜಯ ಅಪ್ಪಗಳು, ಫ.ಗು.ಹಳಕಟ್ಟಿ, ಹಳೇಪೇಟೆ ಚಿಂತಾಮಣಿ ಹಾಗೂ ರಾಮ ಜಾಧವ ಅವರ ಕೊಡುಗೆಯನ್ನು ಮರೆಯುವಂತಿಲ್ಲ’ ಎಂದರು.
ಚನ್ನಬಸವಾನಂದ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಜ್ಞಾನೇಶ್ವರಿ ಮಾತಾಜಿ, ಸಿದ್ಧೇಶ್ವರಿ ಮಾತಾಜಿ, ಕಲ್ಯಾಣಪ್ಪ ಪರಮಾದಿ, ಶಾಸಕ ಅರವಿಂದ ಬೆಲ್ಲದ, ಹಿರಿಯ ವಕೀಲ ಆನಂದಕುಮಾರ್ ಮಗದುಂ ವೇದಿಕೆಯಲ್ಲಿದ್ದರು. ಯುವ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಕೆ.ಎಸ್.ಕೋರಿಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.