ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2020–21ನೇ ಸಾಲಿನ ಪ್ರಶಸ್ತಿಗೆ ‘ಪ್ರಜಾವಾಣಿ’ಯ ವರದಿಗಾರ ಓದೇಶ ಸಕಲೇಶಪುರ, ‘ಡೆಕ್ಕನ್ ಹೆರಾಲ್ಡ್’ ಹಿರಿಯ ಉಪ ಸಂಪಾದಕಿ ದಿವ್ಯಶ್ರೀ ಮುದಕವಿ ಸೇರಿ 12 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಪತ್ರಿಕಾ ಮಾಧ್ಯಮದಲ್ಲಿ ‘ಪ್ರಜಾವಾಣಿ’ ವರದಿಗಾರ ಓದೇಶ ಸಕಲೇಶಪುರ (ಅತ್ಯುತ್ತಮ ನಗರ ವರದಿಗಾರಿಕೆ– ಸಂಕಷ್ಟದಲ್ಲಿ ಸ್ಮಶಾನ ಕಾರ್ಮಿಕರು), ವಿಜಯವಾಣಿ ವರದಿಗಾರ ಆನಂದ ಅಂಗಡಿ(ಅತ್ಯುತ್ತಮ ನಗರ ವರದಿಗಾರಿಕೆ– ಇವರೇ ನಿಜವಾದ ಕೊರೊನಾ ಸೇನಾನಿಗಳು), ಕನ್ನಡಪ್ರಭ ಅಳ್ನಾವರ ವರದಿಗಾರ ಶಶಿಕುಮಾರ ಪತಂಗೆ (ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ– ಅಳ್ನಾವರದಲ್ಲಿ ‘ಮದುವೆ ದಂಧೆ’ ಜೋರು), ಸಂಯುಕ್ತ ಕರ್ನಾಟಕ ಉಪಸಂಪಾದಕ ಸುನೀಲ ಪಾಟೀಲ (ಅತ್ಯುತ್ತಮ ಲೇಖನ–ಧಾರವಾಡ ದೀದಿಗೆ ಮೂರು ನಕ್ಷತ್ರ), ವಿಜಯ ಕರ್ನಾಟಕ ಉಪ ಸಂಪಾದಕಿ ವೀಣಾ ಕುಂಬಾರ (ಅತ್ಯುತ್ತಮ ಲೇಖನ– ಕಠಿಣ ಸಾಧನೆಯಲ್ಲೇ ಆನಂದ!), ಡೆಕ್ಕನ್ ಹೆರಾಲ್ಡ್ ಹಿರಿಯ ಉಪ ಸಂಪಾದಕಿ ದಿವ್ಯಾಶ್ರೀ ಮುದಕವಿ (ಅತ್ಯುತ್ತಮ ಆಂಗ್ಲ ಭಾಷಾ ವರದಿ– ವಾಟರ್ ಹೆರಿಟೇಜ್ ಇನ್ ದ ಏಜ್ ಆಫ್ ಸ್ಕೇರ್ಸಿಟಿ), ಹೊಸದಿಗಂತ ಛಾಯಾಗ್ರಾಹಕ ಮಂಜುನಾಥ ಜರತಾರಘರ (ಅತ್ಯುತ್ತಮ ಛಾಯಾಗ್ರಾಹಣ– ಅವಳಿ ನಗರ ಸ್ತಬ್ಧ), ಸಂಯುಕ್ತ ಕರ್ನಾಟಕ ಪುಟ ವಿನ್ಯಾಸಕ ಆನಂದ ಹುದ್ದಾರ (ಅತ್ಯುತ್ತಮ ಪುಟ ವಿನ್ಯಾಸ– ಕಳೆಗುಂದಿದ ಬಂಗಾರ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೃಶ್ಯ ಮಾಧ್ಯಮದಲ್ಲಿ ನ್ಯೂಸ್ ಫಸ್ಟ್ ವರದಿಗಾರ ಶ್ರೀಧರ ಮುಂಡರಗಿ ಮತ್ತು ಛಾಯಾಗ್ರಾಹಕ ಪ್ರಕಾಶ ಮುಳ್ಳೊಳ್ಳಿ (ಅತ್ಯುತ್ತಮ ಟಿವಿ ವರದಿಗಾರಿಕೆ– ಕಾಂಕ್ರೀಟ್ ಕಾಡಲ್ಲಿ ಚಂಬು ಕುಟಿಕದ ಜೀವನ) ಮತ್ತು ದೂರದರ್ಶನ ವರದಿಗಾರ ಕಿರಣ ಬಾಕಳೆ ಮತ್ತು ಛಾಯಾಗ್ರಾಹಕ ವಿನಾಯಕ ಬಾಕಳೆ(ಅತ್ಯುತ್ತಮ ಟಿವಿ ವರದಿಗಾರಿಕೆ– ಸೋಂಕಿತರಿಗೆ ಸೇವೆಯ ಹಸ್ತ ನೀಡಿದ ವೈದ್ಯರು) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪತ್ರಿಕಾ ಮಾಧ್ಯಮದವರಿಗೆ ಪ್ರಶಸ್ತಿಯು ತಲಾ ₹5 ಸಾವಿರ, ಪ್ರಶಸ್ತಿ ಪತ್ರ ಹಾಗೂ ದೃಶ್ಯ ಮಾಧ್ಯಮದವರಿಗೆ ವರದಿಗಾರ, ಛಾಯಾಗ್ರಾಹಕ ಸೇರಿ ₹10 ಸಾವಿರ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಅ.10ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.