ಹುಬ್ಬಳ್ಳಿ: ‘ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ತೆಗೆದು ಮುಸ್ಲಿಮರಿಗೆ ಕೊಡುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು. ಒಬಿಸಿಯಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೋರಿತ್ತು. ಅದನ್ನು ತಿರಸ್ಕರಿಸಿದ ಆಯೋಗವು ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
‘ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಮೀಸಲಾತಿಯಲ್ಲಿ ಬದಲಾವಣೆ ಮಾಡಿ ಆದೇಶಿಸಿತ್ತು. ಮುಸ್ಲಿಮರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು ಪ್ರವರ್ಗ 3ಎ, 3ಬಿಗೆ ಹಂಚಿಕೆ ಮಾಡಿತ್ತು. ಅದನ್ನು ನಿಲ್ಲಿಸಿರುವುದು ಖಂಡನೀಯ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸದ್ಯ ಪ್ರವರ್ಗ–1ಕ್ಕೆ ಶೇ 4, ಪ್ರವರ್ಗ–2ಎಗೆ ಶೇ 15, ಪ್ರವರ್ಗ 2ಬಿಗೆ ಶೇ 4, ಪ್ರವರ್ಗ 3ಎಗೆ ಶೇ 4 ಮತ್ತು 3ಬಿಗೆ ಶೇ 5ರಷ್ಟು ಮೀಸಲಾತಿ ಇದೆ. ಇದರಲ್ಲಿ ಒಟ್ಟಾರೆಯಾಗಿ ಇದು ಒಬಿಸಿ ಮೀಸಲಾತಿಯಾಗಿದ್ದರೂ, ಮುಸ್ಲಿಮರು ಇದರ ಗರಿಷ್ಠ ಉಪಯೋಗ ಪಡೆಯುತ್ತಿದ್ದಾರೆ’ ಎಂದರು.