ಅಳ್ನಾವರ: ಪಟ್ಟಣದಲ್ಲಿ ರಸ್ತೆ ಬದಿ ಎಲ್ಲೆಂದರಲ್ಲಿ ಜನರು ಕಸ ಸುರಿಯುವುದನ್ನು ತಡೆಯಲು ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಸ ಹಾಕುವ ಸ್ಥಳಗಳಲ್ಲಿ ರಂಗೋಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು.
‘ಪಟ್ಟಣದಲ್ಲಿ ಪ್ರತಿ ಮನೆಗಳಿಂದಲೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಸ ಸಂಗ್ರಹ ಮಾಡುತ್ತಾರೆ. ಆದರೂ ಜನರು ರಸ್ತೆಯ ಬದಿ ಕಸ ಹಾಕಿ ಪರಿಸರ ಹಾಳು ಮಾಡುತ್ತಿದ್ದಾರೆ. ಇದರಿಂದ ಪಟ್ಟಣದ ಅಂದ ಹಾಳಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಭಾಕರ ದೊಡಮನಿ ಹೇಳಿದರು.
‘ಸ್ವಚ್ಛ ಪಟ್ಟಣಕ್ಕೆ ಜನರ ಸಹಕಾರವೂ ಅಗತ್ಯ. ಇಲ್ಲದಿದ್ದರೆ ಸ್ವಚ್ಛ ಭಾರತ ನಿರ್ಮಾಣ ಕನಸಾಗಿಯೇ ಉಳಿಯುತ್ತದೆ. ಜನರು ಹಸಿ, ಒಣ ಕಸವನ್ನು ಬೇರ್ಪಡಿಸಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಸ ಸಂಗ್ರಹ ಮಾಡಲು ಬಂದಾಗ ನೀಡಬೇಕು’ ಎಂದರು.
‘ಅಂಗಡಿ, ಹೋಟೆಲ್ಗಳಲ್ಲಿನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದಂತೆ ವ್ಯಾಪಾರಿಗಳಿಗೆ ತಿಳಿವಳಿಕೆ ಮೂಡಿಸಲಾಗಿದೆ. ಇದು ಮುಂದುವರಿದರೆ ಅಂಗಡಿಗಳ ಪರವಾನಗಿ ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸ್ವಚ್ಛತೆಗೆ ತಗುಲುವ ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು’ ಎಂದು ತಿಳಿಸಿದರು.