ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸೇವಾ ಸ್ತಪಾಹದ ಅಂಗವಾಗಿ,ನಗರದ ದುರ್ಗದ ಬೈಲ್ನಲ್ಲಿ ಬಿಜೆಪಿ ವತಿಯಿಂದ, ‘ಡ್ರಗ್ಸ್ ಮುಕ್ತ ಕರ್ನಾಟಕ’ ಮಾದಕ ವಸ್ತು ಹಾಗೂ ವ್ಯಸನ ನಿರ್ಮೂಲನಾ ಜನಜಾಗೃತಿ ಕಾರ್ಯಕ್ರಮ ಶನಿವಾರ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ, ‘ಚಿತ್ರರಂಗ ಸೇರಿದಂತೆ, ಸಮಾಜ ಹಲವು ಕ್ಷೇತ್ರಗಳನ್ನು ಮಾದಕ ವಸ್ತು ವ್ಯಾಪಿಸಿದೆ. ಯುವ ಸಮುದಾಯವೇ ಈ ದಂಧೆ ಗುರಿಯಾಗಿರುವುದು ಆತಂಕಕಾರಿ. ಹಾಗಾಗಿ, ಸರ್ಕಾರ ಡ್ರಗ್ಸ್ ಕಡಿವಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.
ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ರವೀಂದ್ರ ಮಾತನಾಡಿ, ‘ಕೊರೊನಾ ಸೋಂಕಿನ ಬಗ್ಗೆ ಭಯಗೊಳ್ಳದೆ, ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು ಹಾಗೂ ಸೂಕ್ತ ಅಂತರ ಕಾಪಾಡಿಕೊಳ್ಳುವುದರಿಂದ ನೆಮ್ಮದಿಯಾಗಿರಬಹುದು’ ಎಂದು ಹೇಳಿದರು.
ಸಹ ಸಂಚಾಲಕ ಡಾ. ಮೃತ್ಯುಂಜಯ, ಹುಡಾ ಸದಸ್ಯ ಚಂದ್ರಶೇಖರ ಗೋಕಾಕ, ಜಗದೀಶ ಬುಳ್ಳಾನವರ, ಮಂಜುನಾಥ ಬಿಜವಾಡ, ಮಲ್ಲಿಕಾರ್ಜುನ ಶಿರಗುಪ್ಪಿ, ಡಾ. ಕಾಟಕರ, ಡಾ. ಗಲಗೆ ಹಾಗೂ ವಕ್ತಾರ ಲಕ್ಷ್ಮೀಕಾಂತ ಘೋಡಕೆ ಇದ್ದರು.