ನವಲಗುಂದ: ಮಲಪ್ರಭಾ ಕಾಲುವೆಗೆ ಎರಡು ತಿಂಗಳಿಂದ ನೀರು ಹರಿಸಿದ ಪರಿಣಾಮ ಚನ್ನಮ್ಮನ ಕೆರೆ ಬಹುತೇಕ ಭರ್ತಿಯಾಗಿದೆ.
‘ಮುಂದಿನ ಒಂದು ವರ್ಷ ನವಲಗುಂದಕ್ಕೆ ಪೂರೈಸುವಷ್ಟು ನೀರು ಶೇಖರಣೆಯಾಗಿದೆ. ಕೆರೆಯಲ್ಲಿ ಭರ್ತಿಯಾಗಿರುವ ಹನಿ ನೀರು ಪೋಲಾಗದಂತೆ ಸಾರ್ವಜನಿಕರು ಮಿತವ್ಯಯವಾಗಿ ಬಳಸಿಕೊಳ್ಳಬೇಕು’ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮನವಿ ಮಾಡಿದರು.
‘ಕಾಲುವೆಗೆ ಇನ್ನೊಮ್ಮೆ ನೀರು ಹರಿಸುವಂತೆ ರೈತರು ಮನವಿ ಮಾಡಿರುವುದರಿಂದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು, ಇನ್ನೊಂದು ವಾರ ನೀರು ಹರಿಸುವಂತೆ ಮನವಿ ಮಾಡಿದ್ದೇನೆ’ ಎಂದರು.
‘ಅಣ್ಣಿಗೇರಿ ಪಟ್ಟಣದ ಜನತೆಗೂ ಕೂಡ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಹೇಳಿದರು.
ಪುರಸಭೆಯ ಆಡಳಿತ ಮಂಡಳಿಯೊಂದಿಗೆ ಸೇರಿಕೊಂಡು ಶೀಘ್ರದಲ್ಲೇ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಲಾಗುವುದು ಎಂದು ಮುನೇನಕೊಪ್ಪ ತಿಳಿಸಿದರು.