ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯ ಪರಂಪರೆಗೆ ಸೇರಿಸಿದ ಕಣವಿ: ಡಾ.ಶಾಮಸುಂದರ ಬಿದರಕುಂದಿ

ಡಾ.ಶಾಮಸುಂದರ ಬಿದರಕುಂದಿ ಅಭಿಮತ
Last Updated 29 ಜೂನ್ 2022, 2:16 IST
ಅಕ್ಷರ ಗಾತ್ರ

ಧಾರವಾಡ: ‘ಸಂಪ್ರದಾಯವನ್ನು ಪರಂಪರೆಗೆ ಸೇರಿಸುವ ಮಹತ್ವದ ಕಾರ್ಯವನ್ನು ಡಾ. ಚೆನ್ನವೀರ ಕಣವಿ ಅವರು ಮಾಡಿದರು’ ಎಂದು ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಮಂಗಳವಾರ ಆಯೋಜಿಸಿದ್ದ ಡಾ. ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿನ ಗೋಷ್ಠಿಯಲ್ಲಿ ‘ಕಣವಿ ಅವರ ಸುನೀತ ಕಾವ್ಯ’ ವಿಷಯ ಕುರಿತು ಅವರು ಮಾತನಾಡಿದರು.

‘ಪಾಶ್ಚಾತ್ಯ ಸಾಹಿತ್ಯ, ನವೋದಯ ಸಾಹಿತ್ಯ ಪ್ರಭಾವ, ಹಳೆಗನ್ನಡ ಅಧ್ಯಯನದಿಂದ ಚನ್ನವೀರ ಕಣವಿ ಅವರು ರಚಿಸಿದ ಕಾವ್ಯ ಕನ್ನಡಿಗರನ್ನು ಸೆಳೆಯಿತು. 14ಸಾಲುಗಳ ಸುನೀತದಲ್ಲಿ ಅದ್ಭುತ ಕಾವ್ಯ ರಚನೆ ಮಾಡಿ ಕನ್ನಡಿಗರಿಗೆ ನೀಡಿದರು. ಸುನೀತದಲ್ಲಿ ವಿಶಿಷ್ಟ ಪದಪ್ರಯೋಗ, ಭಾವ, ದೃಷ್ಟಿಕೋನ ನೀಡಿದರು. ಡಾ. ಕಣವಿ ಅವರು ರಚಿಸಿದ 240 ಸುನೀತಗಳನ್ನು ಕೃತಿ–ಆಕೃತಿ, ವ್ಯಕ್ತಿಚಿತ್ರ, ನಿಸರ್ಗ ಸ್ಪಂದನೆ, ನಿವೇದನೆ, ಜಿಜ್ಞಾಸೆ ಎಂದು ವಿಂಗಡಿಸಬಹುದು’ ಎಂದು ವಿವರಿಸಿದರು.

‘ಕಣವಿ ಕವಿತೆಗಳಲ್ಲಿ ಕಾವ್ಯ ಮಿಮಾಂಸೆ’ ವಿಷಯ ಕುರಿತು ಡಾ. ಜಿ.ಎಂ.ಹೆಗಡೆ ಮಾತನಾಡಿ, ‘ಡಾ. ಕಣವಿ ಅವರು ಉತ್ತರ ಕರ್ನಾಟಕದ ಬಹಳಷ್ಟು ಯುವಕವಿಗಳಿಗೆ ಕಾವ್ಯಗುರವಾಗಿದ್ದರು. ಕಾವ್ಯ ಕಟ್ಟುವುದನ್ನು ಕಲಿಸಿ ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಿದರು’ ಎಂದು ನೆನಪಿಸಿಕೊಂಡರು.

‘ಕಾವ್ಯ ಭಾಷೆ. ಕಾವ್ಯ ರಚನೆಯನ್ನು ಕಲಿಸಿದ್ದಾರೆ. ಕಾವ್ಯ, ಮುನ್ನುಡಿ, ಬೆನ್ನುಡಿಗಳ ಮೂಲಕ ಯುವಕವಿಗಳಿಗೆ ಅಗತ್ಯ ಸಲಹೆ ನೀಡಿದ್ದಾರೆ. ಚೆನ್ನವೀರ ಕಣವಿ ಕನ್ನಡ ಸೃಜನಶೀಲತೆ ಬಗ್ಗೆ ನಿರಂತರ ಆಲೋಚನೆ ಮಾಡಿದರು. ಕಾವ್ಯ ಪ್ರಯೋಜನದ ಜಿಜ್ಞಾಸೆ ಮಾಡಿದರು. ಇದು ಅವರ ವೈಚಾರಿಕ ನೆಲೆಯೂ ಆಗಿತ್ತು’ ಎಂದು ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯಾ ನಂತರದ ದೇಶದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಕಣವಿ, ಜಿ.ಎಸ್. ಶಿವರುದ್ರಪ್ಪ ಅವರ ಕಾವ್ಯ ಶೈಲಿಯನ್ನು ಮುಂದುವರಿಸಿದರು. ಯುವ ಜನರನ್ನು ಹಾಡಿನ ಸಂಸ್ಕೃತಿ ಮೂಲಕ ಸಾಹಿತ್ಯದೆಡೆಗೆ ತರಲು ಪ್ರಯತ್ನ ಮಾಡಿದರು’ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ವೀರಣ್ಣ ರಾಜೂರ ಅವರು ‘ಕಣವಿ ಕಾವ್ಯದಲ್ಲಿ ಕನ್ನಡ ಸಂಸ್ಕೃತಿ’ ಕುರಿತು ಮಾತನಾಡಿ, ‘ಚನ್ನವೀರ ಕಣವಿ ಅವರ ಬದುಕಿಗೂ ಬರಹಕ್ಕೂ ವ್ಯತ್ಯಾಸ ಇರಲಿಲ್ಲ. ವಿನಯ, ವಿಧೇಯತೆ, ಸೌಜನ್ಯ, ಸಭ್ಯತೆ ಅವರ ವ್ಯಕ್ತಿತ್ವದ ಲಕ್ಷಣಗಳಾಗಿದ್ದವು. ಅವರ ಸಾಹಿತ್ಯ ಕನ್ನಡ ಸಂಸ್ಕೃತಿಯ ಕೆನೆಯ ರೀತಿಯಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಚೆನ್ನವೀರ ಕಣವಿ ಅವರು ಬರೆದ ‘ವಿಶ್ವಭಾರತಿಗೆ ಕನ್ನಡದಾರತಿ‘ ಕವಿತೆಯನ್ನು ಕುವೆಂಪು ಅವರು ಮೆಚ್ಚಿ, ನನ್ನ ಗೀತೆಗಿಂತ ನಿಮ್ಮ ಗೀತೆ ಚೆನ್ನಾಗಿದೆ ಎಂದು ಹೊಗಳಿದ್ದ ಘಟನೆಯನ್ನು ಸ್ಮರಿಸಿದರು.

‘ಕಣವಿ ಅವರ ಕಾವ್ಯದಲ್ಲಿ ನಿಸರ್ಗಾನುಸಂಧಾನ’ ವಿಷಯ ಕುರಿತು ಡಾ. ವಿಕ್ರಮ್ ವಿಸಾಜಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT