ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಛಬ್ಬಿ ಗ್ರಾಮದ ಪ್ರಸಿದ್ಧ ಗಣೇಶಮೂರ್ತಿಗಳನ್ನು ನೋಡಲು ಕೋವಿಡ್ ಕಾರಣದಿಂದಾಗಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ತಿಳಿಸಿದರು.
ಮೊಹರಂ ಹಾಗೂ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ಆಚರಿಸುವ ಸಂಬಂಧ ಗುರುವಾರ ಛಬ್ಬಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಛಬ್ಬಿಯಲ್ಲಿ ಸಾಂಪ್ರದಾಯಿಕವಾಗಿ ಕುಲಕರ್ಣಿ ಮನೆತನದವರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಬಹುದು. ಆದರೆ, ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಭಕ್ತರಿಗೆ ಗಣೇಶ ದರ್ಶನಕ್ಕೆ ಅವಕಾಶವಿಲ್ಲ. ಸಾರ್ವಜನಿಕ ದರ್ಶನ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು. ಕೋವಿಡ್ ನಿಯಮಾನುಸಾರ ಗಣೇಶೋತ್ಸವ ಆಚರಿಸುವುದಾಗಿ ಕುಲಕರ್ಣಿ ಮನೆತನದವರು ತಿಳಿಸಿದರು.
ಕೋವಿಡ್ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಜನ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲಿನವರು ಮತ್ತು ಮಕ್ಕಳು ಮನೆಯಲ್ಲಿಯೇ ಮೊಹರಂ ಪ್ರಾರ್ಥನೆ ಸಲ್ಲಿಸಬೇಕು. ಜನಸಂದಣಿ ಆಗದಂತೆ ಎಚ್ಚರಿಕೆ ವಹಿಸಿ ತಂಡವಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದರು.
ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಸಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರವ್ವ ಕುರಬರ, ಉಪಾಧ್ಯಕ್ಷ ರವಿ ಹುಲ್ಲಂಬಿ, ಕಂದಾಯ ನಿರೀಕ್ಷಕ ದಾನೇಶ್, ಪಿಡಿಒ ಹರ್ಷ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.