ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಗಡ್ಡಿ ಬೆಲೆ ಕುಸಿತ; ದಿಢೀರ್ ಪ್ರತಿಭಟನೆ

ಚಿಗರಿ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು
Last Updated 4 ನವೆಂಬರ್ 2019, 15:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಅಮರಗೋಳ ಕೃಷಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಏಕಾಏಕಿ ಕುಸಿದಿರುವುದನ್ನು ಖಂಡಿಸಿ ಸೋಮವಾರ ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಭಾಗಗಳಿಂದ ಬಂದ ನೂರಾರು ರೈತರು ಎಪಿಎಂಸಿ ಎದುರು ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

‘ಶನಿವಾರ ಉಳ್ಳಾಗಡ್ಡಿ ದರ ಕ್ವಿಂಟಲ್‌ಗೆ ₹5,500 ರಿಂದ ₹6,000 ಇದ್ದಿದ್ದು, ಸೋಮವಾರ ದಿಢೀರ್ ₹2,300ಕ್ಕೆ ಕುಸಿದಿದೆ. ಎಪಿಎಂಸಿ ವರ್ತಕರು ತಮ್ಮ ಲಾಭಕ್ಕೋಸ್ಕರ ರೈತರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿ ಹುಬ್ಬಳ್ಳಿ–ಧಾರವಾಡ ಮಧ್ಯ ಸಂಚರಿಸುವ ಬಿಆರ್‌ಟಿಎಸ್‌ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

‘ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ. ಪ್ರತಿಭಟನೆ ಹಿಂಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ’ ಡಿಸಿಪಿ ಶಂಕರ ರಾಗಿ ವಿನಂತಿಸಿದರು. ‘ನಿಮ್ಮ ಮೇಲೆ ಭರವಸೆ ಇಲ್ಲ’ ಎಂದು ರೈತರು ಅಲ್ಲಿಯೇ ಧರಣಿ ಕುಳಿತರು.

ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಗೌಡರ ಅವರು, ವರ್ತಕರ ಜೊತೆ ಸಭೆ ನಡೆಸಿ ಅನ್ಯಾಯ ಸರಿಪಡಿಸುತ್ತೇನೆ ಎಂದು ರೈತರ ಮನವೊಲಿಸಿ, ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಚೇರಿಗೆ ಕರೆದುಕೊಂಡು ಹೋದರು.

ಸಭೆಯಲ್ಲಿ ಮೊರಬದ ರೈತ ವಿರೂಪಾಕ್ಷ ಕೊಟಬಾಗಿ ಮಾತನಾಡಿ, ‘ಹೈದರಾಬಾದ್ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಕ್ವಿಂಟಲ್‌ಗೆ ₹6,000 ಇದೆ. ಇಲ್ಲಿ ಯಾಕೆ ಕಡಿಮೆ? ಶನಿವಾರ ₹5,000 ಇತ್ತು. ಇವತ್ತು ದಿಢೀರ್ ಬೆಲೆ ಕುಸಿದಿದೆ. ರೈತರ ಬೆವರ ಹನಿಯಲ್ಲಿ ವರ್ತಕರು ಮತ್ತು ಅಧಿಕಾರಿಗಳು ಐಷಾರಾಮಿ ಜೀವನ ನಡೆಸುವುದು ಬಿಟ್ಟರೆ ನಮಗೆ ನ್ಯಾಯ ದೊರೆಯುತ್ತದೆ’ ಎಂದರು.

ಜಗನ್ನಾಥ ಗೌಡರ ಮಾತನಾಡಿ, ‘ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ಗುಣಮಟ್ಟದ ಉಳ್ಳಾಗಡ್ಡಿಗೆ ನ್ಯಾಯ ಸಮ್ಮತ ಬೆಲೆ ನೀಡುವಂತೆ ವರ್ತಕರ ಸಂಘಕ್ಕೆ ತಿಳಿಸುತ್ತೇನೆ’ ಎಂದರು.

ಉಳ್ಳಾಗಡ್ಡಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ, ‘ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಟೆಂಡರ್ ಕರೆದಿಲ್ಲ. ದರ ನಿಗದಿ ಪಡಿಸುವ ಪೂರ್ವವೇ ಪ್ರತಿಭಟನೆ ನಡೆಸುತ್ತಿದ್ದೀರಿ. ನೀವು ತಂದ ಉಳ್ಳಾಗಡ್ಡಿಗೆ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ದೊರೆಯಲಿದೆ’ ಎಂದು ಭರವಸೆ ನೀಡಿದರು. ಆಗ ರೈತರು ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT