ಉಪ್ಪಿನಬೆಟಗೇರಿ: ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಉಂಟಾದ ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ತಹಶೀಲ್ದಾರ ಹಾಗೂ ತಾಲ್ಲೂಕು ಪಂಚಾಯಿತಿ ಇಒಗೆ ನೀಡಿದ ಆದೇಶದ ಮೇರೆಗೆ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ ನೇತೃತ್ವದ ತಂಡ ಹೆಬ್ಬಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹೆಬ್ಬಳ್ಳಿ ಗ್ರಾಮದಲ್ಲಿ 'ನೀರಿಗಾಗಿ ಗ್ರಾಮಸ್ಥರ ಪರದಾಟ’ ಶೀರ್ಷಿಕೆಯಡಿ ಪ್ರಜಾವಾಣಿ ಪತ್ರಿಕೆಯಲ್ಲಿ ಶನಿವಾರ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಸೂಚನೆ ಮೇರೆಗೆ ತಂಡ ಪರಿಶೀಲನೆ ನಡೆಸಿತು.
ಹೆಬ್ಬಳ್ಳಿ ಗ್ರಾಮದಲ್ಲಿರುವ ಮೇಲ್ಮಟ್ಟದ ಜಲ ಸಂಗ್ರಹಗಾರ(ಓಎಚ್ಟಿ), ನೆಲಮಟ್ಟದ ಜಲ ಸಂಗ್ರಹಗಾರ ಹಾಗೂ ಅಮ್ಮಿನಭಾವಿಯಿಂದ ಕುಡಿಯುವ ನೀರು ಸರಬರಾಜು ಆಗುವ ಪೈಪ್ಲೈನ್ ವ್ಯವಸ್ಥೆ ಪರಿಶೀಲನೆ ವೇಳೆ ಗ್ರಾಮಸ್ಥರು ನೀರಿನ ಸರಬರಾಜಿನಲ್ಲಿ ಉಂಟಾಗುವ ವಿಳಂಬ ಹಾಗೂ ವ್ಯತ್ಯಯವಾಗುತ್ತಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಅಮ್ಮಿನಭಾವಿಯಿಂದ ಹೆಬ್ಬಳ್ಳಿಗೆ ನೀರು ಸರಬರಾಜು ಮಾಡುವ ಪೈಪ್ಗಳನ್ನು ಪರಿಶೀಲಿಸಬೇಕು. ಓಎಚ್ಟಿ ಬದಲಾಯಿಸಬೇಕು ಮತ್ತು ಗ್ರಾಮದ ಜನಸಂಖ್ಯೆ ಹೆಚ್ಚು ಇರುವದರಿಂದ ಇನ್ನೊಂದು ದೊಡ್ಡ ಜಲಸಂಗ್ರಹಗಾರ ಕಟ್ಟಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಹೆಬ್ಬಳ್ಳಿ ಗ್ರಾಮದಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಗಾರ 14 ವರ್ಷ ಹಳೆಯದಾಗಿದ್ದು, ಸುಸ್ಥಿತಿಯಲ್ಲಿದೆ. ಆದರೂ ಹಿರಿಯ ಎಂಜಿನಿಯರ್ ಅದರ ಸಾಮರ್ಥ್ಯವನ್ನು ಮರುಪರಿಶೀಲನೆ ಮಾಡಿಸುತ್ತೇವೆ. ಮುಂಗಾರು ಪೂರ್ವದ ಮಳೆ, ಗಾಳಿ ಇತರ ಕಾರಣಗಳಿಂದ ಆಗು ಹಠಾತ್ ವಿದ್ಯುತ್ ನಿಲುಗಡೆ, ಆಕಸ್ಮಿಕವಾಗಿ ಉಂಟಾಗುವ ಪೈಪ್ ಸೋರಿಕೆಗಳಿಂದ ನೀರಿನ ತೊಂದರೆಯಾಗಿದೆ. ಎಲ್ಲವನ್ನು ಸರಿಪಡಿಸಿ ಕ್ರಮವಹಿಸಲು, ಗ್ರಾಮ ಪಂಚಾಯಿತಿ ಅಧಿಕಾರಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ದೂರವಾಣಿ ಮೂಲಕ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ತಾಂತ್ರಿಕ ಕಾರಣದಿಂದ ಕೆಟ್ಟಿದ್ದ ಬೋರ್ವೇಲ್ ದುರಸ್ತಿ ಮಾಡಿಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಮರುಚಾಲನೆಗೊಳಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಇಒ ಸುಭಾಸ ಸಂಪಗಾಂವಿ, ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ಚಂದ್ರಶೇಖರ ಮಾಲಗಾವಿ, ಪಿಡಿಒ ಬಸವರಾಜ ಮಾದನಬಾವಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.