ಹುಬ್ಬಳ್ಳಿ: ‘ಕಂದಾಯ ಇಲಾಖೆಯಿಂದ ನೀಡುವ ಪಹಣಿ, ಆದಾಯ ಹಾಗೂ ಜಾತಿಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ನಾಗಶೆಟ್ಟಿ ಕೊಪ್ಪದ ಸರ್ಕಾರಿ ಶಾಲೆಯಲ್ಲಿ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಗರ ತಾಲ್ಲೂಕಿನ 4,126 ರೈತರಿಗೆ ಪಹಣಿ ವಿತರಿಸಲಾಗುತ್ತಿದೆ. ಜನನ ಮತ್ತು ಮರಣ ಪತ್ರಗಳನ್ನು ತಕ್ಷಣವೇ ನೀಡುವಂತೆ ಕಂದಾಯ ಸಚಿವ ಆರ್.ಅಶೋಕ್ ನಿರ್ದೇಶನ ನೀಡಿದ್ದಾರೆ. ದಾಖಲೆಗಳಲ್ಲಿ ಹೆಸರು ತಪ್ಪಾಗಿದ್ದರೆ, ಅರ್ಜಿ ಸಲ್ಲಿಸಿದ ದಿನವೇ ತಿದ್ದುಪಡಿ ಮಾಡಿ ಫಲಾನುಭವಿಗಳಿಗೆ ನೀಡಬೇಕು. ಭೂ ದಾಖಲೆಗಳನ್ನು ನೀಡಲು ವಿಳಂಬ ಮಾಡಬಾರದು ಎಂದು ಸೂಚನೆ ನೀಡಲಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಮಂಜುನಾಥ ಬುರ್ಲಿ, ಪ್ರಕಾಶ ಕುರಹಟ್ಟಿ, ರೈತ ಮುಖಂಡರಾದ ಮಾರುತಿ ಬೀಳಗಿ, ಬಸವೆಪ್ಪ ಮೆಣಸಿನಕಾಯಿ, ಈಶ್ವರಗೌಡ ಪಾಟೀಲ ಇದ್ದರು.