ಹುಬ್ಬಳ್ಳಿ: ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ಗಳಾದ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು.
ಭಾರತ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಅರುಣಕುಮಾರ, ಡಿಎಚ್ಒ ಯಶವಂತ ಮದೀನಕರ ಸೇರಿದಂತೆ ಹಲವು ವೈದ್ಯರನ್ನು ಸನ್ಮಾನಿಸಲಾಯಿತು.
ಶಾಖೆಯ ಅಧ್ಯಕ್ಷ ಕ್ರಾಂತಿಕಿರಣ, ಜಿ.ಬಿ. ಸತ್ತೂರು ಸೇರಿದಂತೆ ಹಲವು ವೈದ್ಯರು ಪಾಲ್ಗೊಂಡಿದ್ದರು. ಅಲ್ಲಿಯೇ ಇದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ವೈದ್ಯರ ದಿನದಂದು ಕಿಮ್ಸ್ನಲ್ಲಿ ಪ್ರತಿ ವರ್ಷ ಯಾವ ಕಾರ್ಯಕ್ರಮ ಆಯೋಜಿಸುವ ಪರಿಪಾಠ ಇಲ್ಲ. ಹೊರಗಿನಿಂದ ಬಂದು ವೈದ್ಯರೇ ಗೌರವಿಸುವ ಸಂಪ್ರದಾಯ ರೂಢಿಯಲ್ಲಿದೆ’ ಎಂದು ಅಂಟರತಾನಿ ಹೇಳಿದರು.
ಅಂದಾನಿಮಠ ಲಾ ಅಕಾಡೆಮಿ ವತಿಯಿಂದ ನಗರದ ಮನೋವೈದ್ಯ ವಿನೋದ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಅಧ್ಯಕ್ಷ ಜಿ. ಆರ್. ಅಂದಾನಿಮಠ, ಪ್ರಕಾಶ ಅಂದಾನಿಮಠ, ಜ್ಯೋತಿ ಸಾಲಿಮಠ, ಏಕಬೋಟೆ, ವಕೀಲರಾದ ಅಕ್ಕೂರ, ಬೂದಿಹಾಳ, ರಾಜೇಶ, ಅನುಪಮಾ, ಗುರು ಹಿರೇಮಠ ಇದ್ದರು.
ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ವೈದ್ಯ ಗೋವಿಂದ ಮಣ್ಣೂರು ಅವರಿಗೆ ಸನ್ಮಾನಿಸಿದರು. ಮಲ್ಲಿಕ್ ಸಿಕಂದರ್, ಸುನಿಲ್ ಕುರುಡೆಕರ್ ಇದ್ದರು. ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಕಿಮ್ಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು.