ಹುಬ್ಬಳ್ಳಿ: ‘ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾಗಿದ್ದು, ಅದನ್ನು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗುವಂತಾಗಬೇಕು. ನೇತ್ರದಾನ ಜನಾಂದೋಲನ ಸ್ವರೂಪ ಪಡೆಯಬೇಕು’ ಎಂದು ನರರೋಗ ತಜ್ಞ ಡಾ.ಕ್ರಾಂತಿಕಿರಣ ಹೇಳಿದರು.
ಇಲ್ಲಿನ ದುರ್ಗದ ಬೈಲ್ ವೃತ್ತದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ ಡಾ.ಎಂ.ಎಂ.ಜೋಶಿ ನೇತ್ರ ಆಸ್ಪತ್ರೆಯ ಅಂಗ ಸಂಸ್ಥೆ ಎಸ್.ಜೆ.ಎಂ.ನೇತ್ರ ಭಂಡಾರ ವತಿಯಿಂದ ಏರ್ಪಡಿಸಿದ್ದ ನೇತ್ರದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ಕಣ್ಣುಗಳ ಆರೈಕೆಯಷ್ಟೇ ಅವುಗಳ ರಕ್ಷಣೆಯೂ ಮುಖ್ಯ. ಕಣ್ಣು ಇದ್ದವರು ಮಾತ್ರ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕರು ನೇತ್ರದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಅದಕ್ಕೂ ಮುನ್ನ ಚಿಟಗುಪ್ಪಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ನೀಡಲಾಯಿತು. ಸಂಜೆ ದುರ್ಗದ ಬೈಲ್ ವೃತ್ತದಲ್ಲಿ ನಡೆದ ಪುನೀತ್ ರಾಜ್ಕುಮಾರ್ ನೆನಪು ಕಾರ್ಯಕ್ರಮದಲ್ಲಿ ರಾಜ ಗುರು ಮೆಲೋಡಿ ಗಾನ ಕಲಾ ತಂಡದಿಂದ ಮಧುರ ಮಧುರವಿ ಮಂಜುಳಗಾನ ಸಂಗೀತ ಸಂಜೆ ನಡೆಯಿತು.
ಮುಖಂಡರಾದ ವೀರಭದ್ರಪ್ಪ ಹಾಲರವಿ, ಪ್ರಭು ನವಲಗುಂದಮಠ, ರವಿ ಅಪ್ಪಾಜಿ, ಗೋವಿಂದ ಜೋಶಿ, ಶಿವಾನಂದ ಮುತ್ತಣ್ಣವರ, ರಾಧಾಬಾಯಿ ಸಫಾರೆ, ರಂಗಾಬದ್ದಿ, ಅಶೋಕ ಕಾಟವೆ, ಚಂದ್ರಶೇಖರ ಬೆಳವಾಡಿ ಇದ್ದರು.