ಹುಬ್ಬಳ್ಳಿ: ಜಿಲ್ಲೆಯ ಪೊಲೀಸ್ ಇಲಾಖೆಗೆ ವಾಹನ ಸೇರಿದಂತೆ ಇನ್ನಿತರ ಯಾವುದೇ ಸೌಲಭ್ಯ ಬೇಕಾದರೆ ಪ್ರಸ್ತಾವ ಸಲ್ಲಿಸಿದರೆ ದೊರಕಿಸಿಕೊಡಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಡಿ ನಗರದ ಮಿನಿವಿಧಾನ ಸೌಧದಲ್ಲಿ ಶುಕ್ರವಾರ ಗ್ರಾಮೀಣ ಹಾಗೂ ಮಹಿಳಾ ಪೊಲೀಸ್ ಠಾಣೆಗಳಿಗೆ ತಲಾ ಒಂದು ಗಸ್ತು ವಾಹನ ಹಸ್ತಾಂತರಿಸಿ ಮಾತನಾಡಿದ ಅವರು ’ವಿವಿಧ ಇಲಾಖೆಗಳ ಬೇಡಿಕೆಗೆ ಅನುಗುಣವಾಗಿ ವಾಹನಗಳನ್ನು ನೀಡಲಾಗುವುದು. ಪ್ರತಿ ವರ್ಷ ಶಾಸಕರಿಗೆ ನೀಡಲಾಗುವ ₹2 ಕೋಟಿ ಅನುದಾನದಲ್ಲಿ ಉಪಯೋಗವಾಗುವಂತ ಸೌಲಭ್ಯ ಕೊಡಲಾಗುವುದು’ ಎಂದರು.
ಬಿಜೆಪಿ ಸೇರುವ ಬಗ್ಗೆ ಮಾತನಾಡಿಲ್ಲ: ಬಿಜೆಪಿಗೆ ಸೇರುವ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ. ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಆಯಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಚುನಾವಣೆಗೆ ಇನ್ನೂ ಸಮಯವಿದೆ ಎಂದರು.
’ನನ್ನ ಚುನಾವಣೆ ವಿಚಾರದಲ್ಲಿ ಜಾತಿ ಪ್ರಶ್ನೆಯೇ ಬರಲ್ಲ, ಎಲ್ಲ ಶಿಕ್ಷಕರ ಬೆಂಬಲವೂ ಇದೆ. ಯಾವ ಪಕ್ಷಕ್ಕೂ ಹೋಗಬೇಕು ಎಂದಿಲ್ಲ. ಕೆಲ ಸ್ನೇಹಿತರು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು. ಮತ್ತೆ ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಬಜೆಟ್ ಅಧಿವೇಶನದ ನಂತರ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.
ಹಿಜಾಬ್ ವಿವಾದ ಸೃಷ್ಟಿ ಕೆಲ ವಿದ್ಯಾರ್ಥಿನಿಯರ ಹಿಡನ್ ಅಜೆಂಡಾ ಆಗಿತ್ತು ಮಾತು ಕೇಳಿ ಬರುತ್ತಿದೆಯಲ್ಲವೇ ಎನ್ನುವ ಪ್ರಶ್ನೆಗೆ ‘ಆ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ದುಷ್ಟ ಶಕ್ತಿಗಳು ಯಾವಾಗಲೂ ಸಮಾಜಘಾತುಕ ಕೆಲಸ ಮಾಡುತ್ತವೆ. ಕೆಲವರಿಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದೇ ಕೆಲಸವಾಗಿ ಬಿಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಡಿವೈಎಸ್ಪಿ ಎಂ.ಬಿ. ಸಂಕದ, ಪೊಲೀಸ್ ಇನ್ಸ್ಟೆಕ್ಟರ್ ರಮೇಶ ಗೋಕಾಕ, ಜಿ.ಸಿ. ಡೂಗನವರ, ರವಿಚಂದ್ರ ಡಿ.ಬಿ ಹಾಗೂ ಸಿಬ್ಬಂದಿ ಇದ್ದರು.