ಧಾರವಾಡ: ಸ್ವಯಂ ದೀಪ ಝೆನ್ ಸಂಸ್ಥೆ ಹಾಗೂ ಬೆಂಗಳೂರಿನ ಬಹುರೂಪಿ ಸಂಸ್ಥೆಯ ಸಹಯೋಗದಲ್ಲಿ ಕಥನ ಕವನಗಳ ಕವಿ ಸು.ರಂ.ಎಕ್ಕುಂಡಿ ಅವರ ಜನ್ಮಶತಮಾನೋತ್ಸವವನ್ನು ಅಳ್ನಾವರ ರಸ್ತೆಯಲ್ಲಿರುವ ಸುಮನ ಸಂಗಮ ತೋಟದಲ್ಲಿ ಬುಧವಾರ ಆಚರಿಸಲಾಯಿತು.
ಎಕ್ಕುಂಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಬಕುಲದ ಹೂವುಗಳು ಕೃತಿಯ ನೆನಪಿನಲ್ಲಿ, ಬಕುಲದ ಕವಿ ಎಂದೇ ಹೆಸರಾಗಿದ್ದ ಎಕ್ಕುಂಡಿ ಅವರ ಕವಿತೆಗಳನ್ನು ಓದಲಾಯಿತು.
ಸು.ರಂ.ಎಕ್ಕುಂಡಿ ಅವರ ಮಗ ರಂಗನಾಥ ಎಕ್ಕುಂಡಿ ಹಾಗೂ ಸೊಸೆ ವೇದಾ ಎಕ್ಕುಂಡಿ ಅವರು ‘ಬಕುಲದ ಹೂವುಗಳು’ ಕವಿತೆಯನ್ನು ತೂಗಿಬಿಡುವುದರ ಮೂಲಕ ಎಕ್ಕುಂಡಿ ಹಬ್ಬಕ್ಕೆ ದಾರಿ ಮಾಡಿಕೊಟ್ಟರು. ಕಥೆ, ವಿತೆಗಳು ಕುರಿತು ರಂಗನಾಥ ಅವರು ಮೆಲುಕು ಹಾಕಿದರು. ರಾಜಕುಮಾರ ಮಡಿವಾಳರ ಹಾಗೂ ಹರ್ಷವರ್ಧನ ಶೀಲವಂತರ ಅವರು ಬಕುಲದ ಹೂಗಳು ಕವಿತೆಯನ್ನು ವಾಚಿಸಿದರು.
ಸಾಹಿತಿಗಳಾದ ಶ್ಯಾಮಸುಂದರ ಬಿದರಕುಂದಿ, ಅನಸೂಯಾ ಕಾಂಬಳೆ, ಸಂಗಮೇಶ ಮೆಣಸಿನಕಾಯಿ, ಕೃಷ್ಣಮೂರ್ತಿ ಬಿಳಿಗೆರೆ ಅವರು ಎಕ್ಕುಂಡಿ ಕವಿತೆ ಸಾಲುಗಳಿದ್ದ ಬುಕ್ ಮಾರ್ಕರ್ಗಳನ್ನು ಬಿಡುಗಡೆ ಮಾಡಿದರು.
ಬಹುರೂಪಿ ಸ್ಥಾಪಕ ಜಿ.ಎನ್.ಮೋಹನ್ ಅವರು ಮಾತನಾಡಿ, ‘ಸು.ರಂ.ಎಕ್ಕುಂಡಿ ಅವರು ನಂಬಿದ ಮಾನವೀಯತೆಯ ದೀಪವನ್ನು ಬೆಳಗಿಸಬೇಕಾಗಿದೆ. ಇಂದಿನ ಕಗ್ಗತ್ತಲ ದಿನಗಳನ್ನು ಎದುರಿಸಬೇಕಾಗಿದೆ’ ಎಂದರು.
ಶಾಮಸುಂದರ ಬಿದರಕುಂದಿ ಮಾತಾನಾಡಿ, ‘ಈ ದಿನ ನಾವು ಎಕ್ಕುಂಡಿ ಎಂಬ ಬೀಜವನ್ನು ಬಿತ್ತಿದ್ದೇವೆ. ನಾಡಿನಾದ್ಯಂತ ಅದರ ಫಸಲು ಸಿಗಲಿದೆ’ ಎಂದರು
ನಂತರ ಸುಗಮನ ಸಂಗಮದ ದುಂಡುರಂಗಭೂಮಿಯಲ್ಲಿ ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಎಕ್ಕುಂಡಿ ಕವಿತೆಗಳನ್ನು ವಾಚಿಸಿ, ಹಾಡಿ ಕಾರ್ಯಕ್ರಮಕ್ಕೆ ಮರಗು ತಂದರು.