ಹುಬ್ಬಳ್ಳಿ: ಚಾತುರ್ಮಾಸ್ಯದ ಅಂಗವಾಗಿ ನಗರಕ್ಕೆ ಬರುತ್ತಿರುವ ಒಂಬತ್ತು ಜೈನ ಸಾಧ್ವಿಯರ ಆರ್ಯಿಕಾ ಸಂಘದ ಮಂಗಲ ಪ್ರವೇಶ ಜೂ. 27ರಂದು ನಡೆಯಲಿದೆ.
ಮಧ್ಯಾಹ್ನ 3.30ಕ್ಕೆ ಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಅವರು ಎಂಟು ಜನ ಆರ್ಯಿಕೆಯರು ಮತ್ತು ಒರ್ವ ಕ್ಷುಲ್ಲಿಕಾ ಮಾತಾಜಿ ಜೊತೆ ಮಂಗಲ ಪ್ರವೇಶ ಮಾಡುವರು. ನಗರದ ನ್ಯೂ ಇಂಗ್ಲಿಷ್ ಶಾಲೆ ಬಳಿ ಮಾತಾಜಿಯವರ ಸಂಘಕ್ಕೆ ಸ್ಥಳೀಯ ದಿಗಂಬರ ಜೈನ ಸಮಾಜದವರು ಕುಂಭ ಸ್ವಾಗತ ಕೋರಲಿದ್ದಾರೆ. ಬಳಿಕ ಪಾಲಿಕೆ ಆಯುಕ್ತ ಪ್ರಶಾಂತ ಕುಮಾರ ಮಿಶ್ರಾ ಸಂಘದವರನ್ನು ಬರಮಾಡಿಕೊಳ್ಳಲಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ ಕೆ. ಹೊತಪೇಟಿ ‘ಜೈನ ಸನ್ಯಾಸಿನಿ ವಿಶಾಶ್ರೀ ಮಾತಾಜಿ 25 ವರ್ಷಗಳ ಹಿಂದೆ ಹಿರಿಯ ಜೈನಾಚಾರ್ಯ ವಿರಾಗಸಾಗರ ಮಹಾರಾಜರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು. ಉತ್ತರ ಭಾರತದ ಹಲವಾರು ಮಹಾನಗರಗಳಲ್ಲಿ ಮತ್ತು ಜೈನ ಕ್ಷೇತ್ರಗಳಲ್ಲಿ ಚಾತುರ್ಮಾಸ್ಯ ಮಾಡಿದ್ದಾರೆ’ ಎಂದರು.
‘ಹೋದ ವರ್ಷ ಶ್ರವಣಬೆಳಗೋಳದಲ್ಲಿ ನಡೆದ ಮಹಾಮಸ್ತಾಭಿಷೇಕದಲ್ಲಿ ಪಾಲ್ಗೊಂಡು ಈಗ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಅವರನ್ನು ಹಳಿಂಗಳಿಯ ಝಾಂಝ ಪಥಕದ ವಾದ್ಯ ಮೇಳದೊಂದಿಗೆ ಬಮ್ಮಾಪುರ ರಸ್ತೆ ಮೂಲಕ ಶಾಂತಿನಾಥ ಭವನದ ತನಕ ಶೋಭಾಯಾತ್ರೆ ಮೂಲಕ ಕರೆತರಲಾಗುವುದು. ಶಾಂತಿನಾಥ ಬಸದಿ ಬಳಿ 25 ಜೈನ ಕುಟುಂಬದವರು ಸಾಂಪ್ರದಾಯಿಕವಾಗಿ ಸ್ವಾಗತಿಸಲಿದ್ದಾರೆ. ಸಂಜೆ ಪ್ರವಚನ ಜರುಗಲಿದೆ’ ಎಂದರು.
ವಿಶಾಶ್ರೀ ಮಾತಾಜಿ ಹಾಗೂ ಅವರ ಸಂಘದವರು ನಾಲ್ಕು ತಿಂಗಳು ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಧಿಯಲ್ಲಿ ನಿತ್ಯ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜು. 21ರಂದು ಚಾತುರ್ಮಾಸ್ಯ ಕಳಸ ಸ್ಥಾಪನೆಯ ಸಮಾರಂಭ ನಡೆಯಲಿದೆ.
ಜೈನ ಸಮಾಜದ ಪ್ರಮುಖರಾದ ರಾಜೇಂದ್ರ ಬೀಳಗಿ, ಕ್ಷಣಿಕರಾಜ ರಾಜಮಾನೆ, ಬೃಹ್ಮಕುಮಾರ ಎಸ್. ಬೀಳಗಿ, ಧನಪಾಲ್ ಮುನ್ನೊಳ್ಳಿ, ತೃಷಿಲಾ ಮಾಲಗತ್ತಿ ಇದ್ದರು.